ಚೆನ್ನೈ: 2 ಜಿ ಸ್ಪೆಕ್ಟ್ರಮ್ ಅಥವಾ ಬೋಪೋರ್ಸ್ ಹಗರಣದಂತೆ ರಾಫೆಲ್ ಒಪ್ಪಂದದಲ್ಲಿ ಹಣಕಾಸಿನ ಅವ್ಯವಹಾರ ನಡೆದಿಲ್ಲ .ಹೀಗಾಗಿ ಇದನ್ನು ಜಂಟಿ ಸಂಸದೀಯ ಸಮಿತಿ ಪರಾಮರ್ಶೆಗೆ ನೀಡಲು ಸಾಧ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
2 ಜಿ ಸ್ಪೇಕ್ಟ್ರಮ್ ಹಗರಣದಂತೆ ರಾಫೆಲ್ ಒಪ್ಪಂದದ ವಿರುದ್ಧ ಸಿಎಜಿಯಂತಹ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿಲ್ಲ. ಈ ವಿಚಾರ ಸುಪ್ರೀಂಕೋರ್ಟ್ ಅಂಗಳಕ್ಕೂ ಹೋದಾಗಲೂ ಯುದ್ಧ ವಿಮಾನ ಖರೀದಿ , ದರ ನಿಗದಿ ಪ್ರಕ್ರಿಯೆ ಬಗ್ಗೆ ಸಮಾಧಾನ ವ್ಯಕ್ತಪಡಿಸಿದೆ ಎಂದರು.
ನಂತರ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆಯಾಗಿ ಪ್ರತಿಯೊಂದು ಅಂಶವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರೂ ಪ್ರತಿಪಕ್ಷಗಳು ಕೇಳುತ್ತಿಲ್ಲ. 2 ಜಿ ಸ್ಪೇಕ್ಟ್ರಮ್ ಅಥವಾ ಬೋಪೋರ್ಸ್ ಹಗರಣದಲ್ಲಿ ಹಣದ ವರ್ಗಾವಣೆ ಹಾಗೂ ಕಳ್ಳ ಬ್ಯಾಂಕ್ ಖಾತೆಗೆ ಸಂಬಂಧಿಸಿದ ವಿವಾದಕ್ಕಾಗಿ ಜಂಟಿ ಸಂಸದೀಯ ಸಮಿತಿ ರಚಿಸಲಾಗಿತ್ತು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಅಲ್ಲದೇ , ರಾಫೆಲ್ ಒಪ್ಪಂದದಲ್ಲಿ ಕ್ವಟ್ರೋಚಿಯಂತಹ ಯಾವುದೇ ಮಧ್ಯವರ್ತಿಗಳಿಲ್ಲ. ಬೋಪೋರ್ಸ್ ಹಗರಣದ ಬಗ್ಗೆ ತುಟಿ ಬಿಚ್ಚದ ಕಾಂಗ್ರೆಸ್ ನಾಯಕರು ರಾಫೆಲ್ ಒಪ್ಪಂದ ಸಂಬಂಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
Advertisement