ನವದೆಹಲಿ: ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ರಾಜ್ಯಸಭೆ ಬುಧವಾರ ಒಪ್ಪಿಗೆ ಸೂಚಿಸುವ ಮೂಲಕ ಸಂಸತ್ತಿನ ಅನುಮೋದನೆ ಪಡೆದಂತಾಗಿದೆ.
ಸಿಪಿಐ (ಎಂ) ಸದಸ್ಯ ಟಿ.ಕೆ. ರಂಗರಾಜನ್ ಹಾಗೂ ಸಿಪಿಐ ಸದಸ್ಯ ಡಿ. ರಾಜಾ ಅವರು ಸೂಚಿಸಿದ ತಿದ್ದುಪಡಿಗಳನ್ನು ಸದನ ತಿರಸ್ಕರಿಸಿದ ನಂತರ ನಿರ್ಣಯವನ್ನು ರಾಜ್ಯಸಭೆ ಧ್ವನಿಮತದ ಮೂಲಕ ಅಂಗೀಕರಿಸಿತು. ಲೋಕಸಭೆ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಮಂಗಳವಾರ ಅನುಮೋದಿಸಿತು.
ಇದಕ್ಕೂ ಮುನ್ನ ನಿರ್ಣಯದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ, ಸಾರ್ವತ್ರಿಕ ಚುನಾವಣೆ ಸೋಲಿಗೆ ಇವಿ ಎಂ ಗಳನ್ನು ಹೊಣೆ ಮಾಡುತ್ತಿರುವ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಸ್ವತಃ ತಮ್ಮ ಮೇಲೆ ವಿಶ್ವಾಸವಿಲ್ಲದವರು ವಿದ್ಯುನ್ಮಾನ ಮತಯಂತ್ರಗಳನ್ನು ದೂರುತ್ತಾರೆ ಎಂದು ದೂರಿದರು. ವಿಪಕ್ಷಗಳು ತಮ್ಮ ಸೋಲನ್ನು ಇವಿಎಂ ಹೆಸರಿನಲ್ಲಿ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಮೋದಿ, ರಾಜ್ಯಸಭೆಯಲ್ಲಿ ಹಾಜರಿರುವ ಅನೇಕ ಪಕ್ಷಗಳಿಗೆ ಇವಿಎಂ ಮೂಲಕ ನಡೆದ ಚುನಾವಣೆಯಲ್ಲಿ ವಿವಿಧ ರಾಜ್ಯಗಳಲ್ಲಿ ಸರ್ಕಾರ ರಚಿಸುವ ಅವಕಾಶ ದೊರೆತಿದೆ. ಆದರೆ, ಈಗ ಏಕೆ ಇವಿಎಂ ಕುರಿತು ಪ್ರಶ್ನೆ ಎತ್ತುತ್ತಿವೆ ಎಂದು ಪ್ರಶ್ನಿಸಿದರು. ಈ ಹಿಂದೆ ಇವಿಎಂ ಕುರಿತ ಆರೋಪಗಳ ಚರ್ಚೆಗೆ ಚುನಾವಣಾ ಆಯೋಗ ಎಲ್ಲಾ ಪಕ್ಷಗಳ ಪ್ರತಿನಿಧಿಗಳನ್ನು ಆಹ್ವಾನಿಸಿದಾಗ, ಕೇವಲ ಸಿಪಿಐ ಹಾಗೂ ಎನ್ ಸಿ ಪಿ ಪಕ್ಷಗಳ ನಾಯಕರು ಆಗಮಿಸಿದ್ದರು. ಉಳಿದವರು ಏಕೆ ಹೋಗಲಿಲ್ಲ ಎಂಬುದಕ್ಕೆ ಅವರೇ ಉತ್ತರ ನೀಡಬೇಕು ಎಂದರು.
‘ಒಂದು ದೇಶ ಒಂದು ಚುನಾವಣೆ’ ಪರಿಕಲ್ಪನೆಯನ್ನು ವಿರೋಧಿಸು ವಿಪಕ್ಷಗಳ ವಿರುದ್ಧ ಕಿಡಿಕಾರಿದ ಮೋದಿ, ಈ ವಿಷಯದಲ್ಲಿ ಕೂಡ ವಿಪಕ್ಷಗಳು ಹಳೆಯ ಧೋರಣೆಯನ್ನೇ ಮುಂದುವರಿಸುತ್ತಿವೆ. ಕೆಲವರಿಗೆ ಈ ನೀತಿ ಇಷ್ಟವಾಗದಿರಬಹುದು. ಆದರೆ, ಆ ಕುರಿತು ತಮ್ಮ ಅನಿಸಿಕೆ ಮಂಡಿಸಿ ಚರ್ಚೆಗೆ ಸಹಕರಿಸಬೇಕು. ಚುನಾವಣೆಯಲ್ಲಿ ಸುಧಾರಣೆಗಳು ನಿರಂತರ ಪ್ರಕ್ರಿಯೆ ಎಂದರು.
Advertisement