ದೇಶಾದ್ಯಂತ ವಿವಿಧ ಭಾಗಗಳಲ್ಲಿಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತಿರುವವರೊಂದಿಗೆ ಮಾ.20 ರಂದು ಸಂವಾದ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, "ಚೌಕೀದಾರ ಎಂಬ ಪದ ಈಗ ರಾಷ್ಟ್ರಭಕ್ತಿ ಹಾಗೂ ಪ್ರಾಮಾಣಿಕತೆಗೆ ಸಮಾನಾರ್ಥಕವಾಗಿದೆ. ನನ್ನನ್ನು ನೇರವಾಗಿ ಹೆಸರಿಸಿ ಆರೋಪ ಮಾಡುವುದಕ್ಕೆ ಎದುರಾಳಿಗಳಿಗೆ ಧೈರ್ಯವಿಲ್ಲ. ಆದ್ದರಿಂದ ಕಾವಲುಗಾರರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಪ್ರಧಾನಿ ಮೋದಿ ತಮ್ಮನ್ನು ದೇಶದ ಕಾವಲುಗಾರ ಎಂದು ಹೇಳಿಕೊಂಡಿದ್ದರು. ಇದನ್ನೇ ಟೀಕೆಗೆ ಬಳಸಿಕೊಂಡಿದ್ದ ರಾಹುಲ್ ಗಾಂಧಿ ರಾಫೆಲ್ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾಗ ದೇಶದ ಕಾವಲುಗಾರ ಕಳ್ಳ ಎಂದು ವಾಗ್ದಾಳಿ ನಡೆಸಿದ್ದರು. ತಮ್ಮ ವಿನೂತನ ರೀತಿಯ ಚುನಾವಣಾ ಪ್ರಚಾರಗಳಿಗೆ ಖ್ಯಾತಿ ಪಡೆದಿರುವ ಮೋದಿ, ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಮೇ ಭೀ ಚೌಕೀದಾರ್ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದರು.