ಹೈದರಾಬಾದ್: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಕಲಿ ಸಹಿ ಬಳಸಿ ಪತ್ರ ತಯಾರಿಕೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದಡಿ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ಪಿ. ಮುರಳಿಧರ ರಾವ್ ಸೇರಿ 9 ಮಂದಿಯ ವಿರುದ್ಧ ಹೈದರಾಬಾದ್ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೈದರಾಬಾದ್ ರಿಯಲ್ ಎಸ್ಟೇಟ್ ಉದ್ಯಮಿ ಮಹಿಪಾಲ್ ರೆಡ್ಡಿ ಪತ್ನಿ ಟಿ. ಪ್ರವರ್ಣ ರೆಡ್ಡಿ ಎನ್ನುವವರು ನೀಡಿದ ದೂರಿನ ಹಿನ್ನೆಲೆಯಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಫಾರ್ಮಾ ಎಕ್ಸಿಲ್ ಅಧ್ಯಕ್ಷ ಸ್ಥಾನ ಕೊಡಿಸುವ ಆಮಿಷ ಒಡ್ಡಿ ಮುರಳಿಧರ ರಾವ್ ಹಾಗೂ ಇತರರು ರೆಡ್ಡಿಯವರಿಂದ ೨.೧೭ ಕೋಟಿ ರು ಪಡೆದು ವಂಚಿಸಿದ್ದಾರೆ, ಈ ವೇಳೆ ನಿರ್ಮಲಾ ಸೀತಾರಾಮನ್ ಅವರ ನಕಲಿ ಸಹಿ ಇದ್ದ ಪತ್ರವನ್ನು ನಮಗೆ ತೋರಿಸಿದ್ದ ಕಾರಣಕ್ಕೆ ನಾವು ರಾವ್ ಅವರಿಗೆ ಹಣ ನೀಡಿದೆವು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ಮುರಳಿಧರರಾವ್ ಮಾತ್ರ "ಈ ಪ್ರಕರಣಕ್ಕೆ, ನಮಗೆ ಸಂಬಂಧವಿಲ್ಲ" ಎಂದು ತಮ್ಮ ಮೇಲಿನ ಆರೋಪವನ್ನು ಸಾರಾಸಗಟು ನಿರಾಕರಿಸಿದ್ದಾರೆ.