ತಿಮ್ಮಪ್ಪನ ದರ್ಶನದಿಂದ ವಿಶಿಷ್ಟ ಅನುಭವ-ಸಿಜೆಐ ಅರವಿಂದ ಬೊಬ್ಡೆ
ತಿರುಮಲ: ಭಾರತದ 47 ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದ ನಂತರ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅವರು ಭಾನುವಾರ ತಿರುಮಲಕ್ಕೆ ಭೇಟಿ ನೀಡಿ, ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು.
‘ತಾವು ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಕಳೆದ 40 ವರ್ಷಗಳಿಂದ ಭೇಟಿ ನೀಡುತ್ತಿದ್ದು, ಆದರೆ, ಈ ಬಾರಿಯ ಭೇಟಿಯಲ್ಲಿ ತಮಗೆ ಹೊಸ ಅನುಭವವಾಗಿದೆ.’ ಎಂದು ಬೊಬ್ಡೆ ಅವರು ದರ್ಶನದ ನಂತರ ತಿಳಿಸಿದ್ದಾರೆ.
ದರ್ಶನಕ್ಕೂ ಮುನ್ನ ದೇವಾಲಯದ ಪ್ರವೇಶ ದ್ವಾರದಲ್ಲಿ ಮುಖ್ಯ ನ್ಯಾಯಮೂರ್ತಿಗಳಿಗೆ ದೇವಾಲಯದ ಅರ್ಚಕರು ಸಾಂಪ್ರದಾಯಿಕ ಸ್ವಾಗತ ಕೋರಿದರು. ಓಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್, ಹೆಚ್ಚುವರಿ ಎ.ವಿ.ಧರ್ಮಾರೆಡ್ಡಿ ಬೊಬ್ಡೆಯವರನ್ನು ಬರಮಾಡಿಕೊಂಡರು. ಬಳಿಕ ಪುತ್ರ ಶ್ರೀನಿವಾಸ್ ಬೊಬ್ಡೆ ಅವರೊಂದಿಗೆ ಮುಖ್ಯನ್ಯಾಯಮೂರ್ತಿಗಳು ಗರ್ಭಗುಡಿಯಲ್ಲಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದರು. ಆಂಧ್ರಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಜಿತೇಂದ್ರ ಮಹೇಶ್ವರಿ ಸಹ ಬೊಬ್ಡೆ ಅವರೊಂದಿಗೆ ಸ್ವಾಮಿಯ ದರ್ಶನ ಪಡೆದರು.
ದರ್ಶನದ ಬಳಿಕ ರಂಗನಾಯಕುಲ ಮಂಟಪಂ ನಲ್ಲಿ ದೇವಸ್ಥಾನದ ಅರ್ಚಕರು ಬೊಬ್ಡೆಯವರಿಗೆ ವೇದಾಶೀರ್ವಾಚನ ನೀಡಿದರು. ಬಳಿಕ ಪ್ರಸಾದ, ದೇವರ ಫೋಟೋ ನೀಡಲಾಯಿತು.
ಹಲವಾರು ಪ್ರಮುಖ ಪ್ರಕರಣಗಳನ್ನು ನಿರ್ಧರಿಸಿದ ಮತ್ತು ಇತ್ತೀಚಿನ ಐತಿಹಾಸಿಕ ಅಯೋಧ್ಯೆಯ ತೀರ್ಪಿನ ಭಾಗವಾಗಿದ್ದ ನ್ಯಾಯಮೂರ್ತಿ ಬೊಬ್ಡೆ ಅವರು ಕಳೆದ ವಾರ 2019 ರ ನವೆಂಬರ್ 18 ರಂದು ಭಾರತದ 47 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ