ಎನ್ ಸಿಪಿ ಶಾಸಕ ಕಾಣೆ; ಮಹಾರಾಷ್ಟ್ರದ ಶಹಪುರ ಠಾಣೆಯಲ್ಲಿ ದೂರು ದಾಖಲು
ಮುಂಬೈ: ಮಹಾರಾಷ್ಟ್ರದಲ್ಲಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಅಜಿತ್ ಪವಾರ್ ನೇತೃತ್ವದಲ್ಲಿ ಎನ್ ಸಿಪಿಯ ಹಲವು ಶಾಸಕರು ಬಿಜೆಪಿಗೆ ಸರ್ಕಾರ ರಚನೆ ಮಾಡಲು ಬೆಂಬಲ ನೀಡಿದ ನಂತರ ಕಾಣೆಯಾದ ಶಾಸಕರೊಬ್ಬರ ವಿರುದ್ಧ ಕೇಸು ದಾಖಲಾಗಿದೆ.
ನಿನ್ನೆ ಬೆಳಗ್ಗೆ ರಾಜಭವನದಲ್ಲಿ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ವೇಳೆ ಶಹಪುರ ಎನ್ ಸಿಪಿ ಶಾಸಕ ದೌಲತ್ ದರೊಡ ಅವರು ರಾಜಭವನಕ್ಕೆ ಬಂದ ನಂತರ ಕಾಣೆಯಾದರು. ಮೊನ್ನೆ ಶುಕ್ರವಾರ ರಾತ್ರಿ ದರೊಡ ತಮ್ಮ ಕ್ಷೇತ್ರದ ಪಕ್ಕದ ಥಾಣೆಯಿಂದ ತಮ್ಮ ಪುತ್ರ ಕರಣ್ ಜೊತೆ ಮುಂಬೈಗೆ ಬಂದಿದ್ದರು. ಮುಂಬೈಗೆ ಬಂದ ನಂತರ ಅವರ ಪತ್ತೆಯಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾಜಿ ಶಾಸಕ ಪಾಂಡುರಂಗ ಬರೊರ ಶಹಪುರ ಪೊಲೀಸ್ ಠಾಣೆಯಲ್ಲಿ ದರೊಡ ಅವರು ಕಾಣೆಯಾಗಿದ್ದಾರೆ ಎಂದು ಕೇಸು ದಾಖಲಿಸಿದ್ದಾರೆ.
ಈ ಮಧ್ಯೆ ನಿನ್ನೆ ಮುಂಬೈಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕರಣ್, ನಿನ್ನೆ ಬೆಳಗ್ಗೆಯಿಂದ ತಂದೆ ನಮ್ಮ ಸಂಪರ್ಕಕ್ಕೂ ಸಿಗುತ್ತಿಲ್ಲ. ಎಲ್ಲಿ ಹೋಗಿದ್ದಾರೆ ಎಂದು ನಮಗೂ ಗೊತ್ತಿಲ್ಲ. ಅವರು ಶರದ್ ಪವಾರ್ ಪರವಾಗಿ ಇರಬೇಕೆಂದು ನಮ್ಮ ಆಸೆ ಕೂಡ ಆಗಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ