ಪಾಕ್ ಆಕ್ರಮಿತ ಕಾಶ್ಮೀರ ಭಾಗಕ್ಕೆ ವಿದೇಶಿ ನಿಯೋಗ ಕರೆದುಕೊಂಡು ಹೋಗಿದ್ದು ಪಾಕಿಸ್ತಾನದ ಹೊಸ ನಾಟಕ: ಭಾರತ 

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾಗಕ್ಕೆ ವಿದೇಶಿ ರಾಯಭಾರಿಗಳ ನಿಯೋಗವನ್ನು ಕೊಂಡೊಯ್ದಿರುವ ಪಾಕಿಸ್ತಾನದ ಕ್ರಮ 'ಬೆತ್ತಲೆ ಪ್ರಚಾರ'ದಂತೆ ಎಂದು ಭಾರತ ವ್ಯಾಖ್ಯಾನಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾಗಕ್ಕೆ ವಿದೇಶಿ ರಾಯಭಾರಿಗಳ ನಿಯೋಗವನ್ನು ಕೊಂಡೊಯ್ದಿರುವ ಪಾಕಿಸ್ತಾನದ ಕ್ರಮ 'ಬೆತ್ತಲೆ ಪ್ರಚಾರ'ದಂತೆ ಎಂದು ಭಾರತ ವ್ಯಾಖ್ಯಾನಿಸಿದೆ. ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಹಲವಾರು ಭಯೋತ್ಪಾದಕ ಶಿಬಿರ ತಾಣಗಳನ್ನು ಗುರಿಯಾಗಿಸಿಕೊಂಡು ಭಾರತ ಫಿರಂಗಿ ಗುಂಡಿನ ದಾಳಿ ನಡೆಸಿದ ನಂತರ ಪಾಕಿಸ್ತಾನ ವಿದೇಶಿ ರಾಯಭಾರಿಗಳನ್ನು ಕರೆದೊಯ್ದಿದೆ.


ವಿಶ್ವಾದ್ಯಂತ ನಿಯೋಗ ಕೇಂದ್ರಗಳಲ್ಲಿ ಕಾಶ್ಮೀರ ಘಟಕಗಳನ್ನು ಪಾಕಿಸ್ತಾನ ಸ್ಥಾಪಿಸಿದ್ದು ಇಲ್ಲಿನ ಚಟುವಟಿಕೆ ಬಗ್ಗೆ ಸರ್ಕಾರಗಳು ಎಚ್ಚರಿಕೆಯಿಂದಿರಬೇಕು ಎಂದು ಸಹ ವಿದೇಶಾಂಗ ಸಚಿವಾಲಯ ವಿದೇಶಗಳಿಗೆ ಹೇಳಿದೆ. ಸುಳ್ಳು ಪ್ರಚಾರದ ಮೂಲಕ ಜನರನ್ನು ತೀವ್ರಗಾಮಿಗಳನ್ನಾಗಿ ಮಾಡುವುದು ಈ ಹೊಸ ಘಟಕಗಳ ಮುಖ್ಯ ಉದ್ದೇಶವಾಗಿದೆ ಎಂದು ಭಾರತ ಸರ್ಕಾರ ಹೇಳಿದೆ.


ಭಾರತದ ವಿರೋಧವಿದ್ದರೂ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆ ವಿದೇಶಿ ನಿಯೋಗಗಳನ್ನು ಕರೆದೊಯ್ದಿರುವುದು ಪಾಕಿಸ್ತಾನ ಆಡುತ್ತಿರುವ ನಾಟಕವಾಗಿದೆ. ಇಂತಹ ಸುಳ್ಳು, ಬೆತ್ತಲೆ ಪ್ರಚಾರವನ್ನು ಪಾಕಿಸ್ತಾನ ಮಾಡುತ್ತಾ ಬಂದಿದೆ. ಪಾಕಿಸ್ತಾನ ಅಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿನ ವಾಸ್ತವ ಸಂಗತಿಯನ್ನು ಮರೆಮಾಚಿ ಸಂಪೂರ್ಣ ಭಿನ್ನ ಚಿತ್ರಣವನ್ನು ತೋರಿಸಲು ಪ್ರಯತ್ನಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.


ಭಾರತ ಮತ್ತು ಪಾಕಿಸ್ತಾನ ಮಧ್ಯೆ ಗಡಿನಿಯಂತ್ರಣ ರೇಖೆಯುದ್ದಕ್ಕೂ ಇರುವ ಭಯೋತ್ಪಾದಕ ಶಿಬಿರ ತಾಣಗಳನ್ನು ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸಲು ಬಳಸಲಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು.
ಮೊನ್ನೆ ಮಂಗಳವಾರ ವಿದೇಶಿ ರಾಯಭಾರಿಗಳ ನಿಯೋಗವನ್ನು ಪಾಕ್ ಆಕ್ರಮಿತ ಕಾಶ್ಮೀರ ಭಾಗಕ್ಕೆ ಪಾಕಿಸ್ತಾನ ಕರೆದುಕೊಂಡು ಹೋಗಿ ನಾಗರಿಕರು ನೆಲೆಸಿರುವ ಪ್ರದೇಶಗಳಲ್ಲಿ ಭಾರತೀಯ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ತೊಂದರೆ ಕೊಡುತ್ತಿದೆ ಎಂದು ಆಪಾದಿಸಿತ್ತು.

ಜಮ್ಮು-ಕಾಶ್ಮೀರದ ತಂಗ್ದರ್ ಮತ್ತು ಕೆರನ್ ವಲಯಗಳಲ್ಲಿ ಪಾಕಿಸ್ತಾನ ಸೇನೆಯ 6ರಿಂದ 10 ಮಂದಿ ಯೋಧರನ್ನು ಕೊಂದು ಹಾಕಿ ಮೂರು ಉಗ್ರತಾಣಗಳನ್ನು ನಾಶಗೊಳಿಸಲಾಗಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ ಎರಡು ದಿನಗಳ ನಂತರ ಪಾಕಿಸ್ತಾನ ಪ್ರತೀಕಾರದ ಕ್ರಮವಾಗಿ ವಿದೇಶಿ ನಿಯೋಗಗಳನ್ನು ಕೊಂಡೊಯ್ದಿದೆ. ಯಾವುದೇ ಉಗ್ರತಾಣಗಳನ್ನು ಭಾರತೀಯ ಸೇನೆ ನಾಶಪಡಿಸಿಲ್ಲ ಎಂದು ಪಾಕಿಸ್ತಾನ ಹೇಳಿದೆ.


ಪಾಕಿಸ್ತಾನ ನಿಜಕ್ಕೂ ಉಗ್ರರನ್ನು ನಾಶಗೊಳಿಸುವ ಮನಸ್ಸು ಹೊಂದಿದ್ದರೆ ಭಯೋತ್ಪಾದಕರನ್ನು ಅಮೂಲಾಗ್ರವಾಗಿ ತನ್ನ ನೆಲದಿಂದ ಕಿತ್ತುಹಾಕುವ ನಿಖರವಾದ ಸ್ಥಳಕ್ಕೆ ಕರೆದುಕೊಂಡು ಹೋಗಬೇಕಾಗಿತ್ತು ಎಂದು ರವೀಶ್ ಕುಮಾರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com