ಒಪ್ಪಂದ ರದ್ದು; ಸೈಲ್ ಅಧ್ಯಕ್ಷರ ಹತ್ಯೆಗೆ ಖಾಸಗಿ ಗುತ್ತಿಗೆದಾರನಿಂದ ಸಂಚು
ನವದೆಹಲಿ: ಕಳಪೆ ಗುಣಮಟ್ಟದ ಕಲ್ಲಿದ್ದಲು ಪೂರೈಸಿದ್ದಕ್ಕೆ ಗುತ್ತಿಗೆಯನ್ನು ತಿರಸ್ಕರಿಸಿದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ(ಸೈಲ್) ಅಧ್ಯಕ್ಷರನ್ನು ಹತ್ಯೆಗೈಯಲು ಪಿತೂರಿ ನಡೆಸಿದ ಖಾಸಗಿ ಗುತ್ತಿಗೆದಾರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಭಾರತೀಯ ದಂಡ ಸಂಹಿತೆ 307ರಡಿ ಮತ್ತು 34ರಡಿ ಹೌಜಾ ಖಾಸ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಖಾಸಗಿ ಗುತ್ತಿಗೆದಾರ ಅಶೋಕ್ ಕುಮಾರ್ ಸಿಂಗ್ ಎಂಬಾತನನ್ನು ನೈರುತ್ಯ ದೆಹಲಿಯ ವಸಂತ್ ಕುಂಜ್ ನ ಆತನ ಮನೆಯಲ್ಲಿ ದೆಹಲಿ ಅಪರಾಧ ವಿಭಾಗ ಪೊಲೀಸರು ಬಂಧಿಸಿದ್ದಾರೆ.
ಕಳೆದ ತಿಂಗಳು, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಅಧ್ಯಕ್ಷ ಅನಿಲ್ ಕುಮಾರ್ ಚೌಧರಿಯವರು ಕಚೇರಿಯಿಂದ ತಮ್ಮ ಮನೆಗೆ ಸಾಯಂಕಾಲ ಹೊತ್ತು ವಾಪಸ್ಸಾಗುತ್ತಿದ್ದ ವೇಳೆ ಕ್ರಾಂತಿ ಮಾರ್ಗದಲ್ಲಿ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಅದೇ ದಿನ ಪೊಲೀಸರು ಅಶೋಕ್ ಕುಮಾರ್ ಸಿಂಗ್ ನ ಸಹಚರ ಸುನಿಲ್ ಬಲ್ಹಾರ ಎಂಬಾತನನ್ನು ಬಂಧಿಸಿದ್ದರು.
ಆರಂಭದಲ್ಲಿ ಪೊಲೀಸರು ಇದೊಂದು ರಸ್ತೆಯಲ್ಲಿ ಹೋಗುವಾಗ ಉಂಟಾದ ಜಗಳ ಎಂದು ಶಂಕಿಸಿದ್ದರು. ಆದರೆ ತನಿಖೆ ನಡೆಸಿದ ನಂತರ ಇದು ಪೂರ್ವಯೋಜಿತ ದಾಳಿ ಎಂದು ಗೊತ್ತಾಯಿತು ಎನ್ನುತ್ತಾರೆ ಅಪರಾಧ ವಿಭಾಗದ ಉಪ ಆಯುಕ್ತ ರಾಮ್ ಗೋಪಾಲ್ ನಾಯಕ್.
ಕಳೆದ ವರ್ಷ, ಸೈಲ್ ಮತ್ತು ಸಿಂಗ್ ಪುತ್ರನ ಅಮೆರಿಕಾ ಮೂಲದ ಕಂಪೆನಿ ನಡುವೆ ಕಲ್ಲಿದ್ದಲು ಪೂರೈಕೆ ಸಂಬಂಧ ಒಪ್ಪಂದವೇರ್ಪಟ್ಟಿತ್ತು. ಕಂಪೆನಿಯಿಂದ ಪೂರೈಸಲಾಗಿದ್ದ ಮಾದರಿಗಳು ಕಳಪೆ ಗುಣಮಟ್ಟದ್ದಾಗಿದ್ದರಿಂದ ತಿರಸ್ಕೃತಗೊಂಡಿತ್ತು. ಸೈಲ್ ಕಡೆಯಿಂದ ಕಂಪೆನಿಗೆ ಮೊದಲ ಭಾಗವಾಗಿ 30 ಕೋಟಿ ರೂಪಾಯಿ ಸಲ್ಲಿಕೆಯಾಗಿತ್ತು ಕೂಡ. ಆದರೆ ಕಲ್ಲಿದ್ದಲು ಮಾದರಿ ತೃಪ್ತಿ ಕಂಡುಬರದಿದ್ದ ಹಿನ್ನಲೆಯಲ್ಲಿ ನಂತರ ಗುತ್ತಿಗೆ ಒಪ್ಪಂದ ರದ್ದಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ