ಓಂ, ಗೋವು ಪದ ಕೇಳಿದರೇ ಕೆಲವರಿಗೆ ಆತಂಕವಾಗುತ್ತದೆ: ಪ್ರಧಾನಿ ಮೋದಿ
ಮಥುರಾ: ಕೆಲವರು ಓಂ ಮತ್ತು ಗೋವು ಎಂಬ ಶಬ್ದ ಕೇಳಿದ ತಕ್ಷಣ ದೇಶವು 16ನೇ ಶತಮಾನಕ್ಕೆ ಮರಳಿದೆ ಎಂದು ಕಿರುಚುತ್ತಾರೆ. ಇದು ದುರಾದೃಷ್ಟಕರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ.
ಇಂದು ಉತ್ತರ ಪ್ರದೇಶದ ಮಥುರಾದಲ್ಲಿ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮ (ಎನ್ಎಡಿಸಿಪಿ) ಮತ್ತು ರಾಷ್ಟ್ರೀಯ ಕೃತಕ ಗರ್ಭಧಾರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಪ್ರಧಾನಿ, ನಮ್ಮ ದೇಶದಲ್ಲಿ ಗೋವು ಮತ್ತು ಓಂ ಪದಗಳನ್ನು ಕೇಳಿದರೆ ಕೆಲವರಿಗೆ ಆಗುವುದಿಲ್ಲ. ಈ ಪದಗಳನ್ನು ಕೇಳಿದರೆ ಅವರು ನಮ್ಮ ದೇಶ 16ನೇ ಶತಮಾನಕ್ಕೆ ಹೋಗಿದೆ ಎಂದು ಭಾವಿಸುತ್ತಾರೆ. ಇಂಥ ಸಂಕುಚಿತ ಮನೋಭಾವದಿಂದ ದೇಶದ ಪ್ರಗತಿ ಸಾಧ್ಯವಿಲ್ಲ ಎಂದರು.
ಆಫ್ರಿಕಾದಲ್ಲಿ ರವಾಂಡಾ ಎಂಬ ದೇಶ ಇದೆ. ನಾನು ಅಲ್ಲಿಗೆ ಹೋಗಿದ್ದೆ. ಒಂದು ಪ್ರಮುಖ ಕಾರ್ಯಕ್ರಮವಿದೆ. ಅದು ಏನೆಂದರೆ ಸರ್ಕಾರವೇ ಜನರಿಗೆ ಹಸುಗಳನ್ನು ನೀಡುತ್ತದೆ. ಆ ಹಸುಗೆ ಜನಿಸುವ ಹೆಣ್ಣು ಕರವನ್ನು ವಾಪಸ್ ಸರ್ಕಾರಕ್ಕೆ ನೀಡುಬೇಕು ಎಂಬ ಷರತ್ತು ವಿಧಿಸಲಾಗುತ್ತದೆ. ಜನರಿಂದ ವಾಪಸ್ ಪಡೆಯುವ ಹೆಣ್ಣು ಕರುವನ್ನು ಹಸು ಇಲ್ಲದವರಿಗೆ ಸರ್ಕಾರ ನೀಡುತ್ತೆ. ಈ ರೀತಿ ಮಾಡುವುದರಿಂದ ರವಾಂಡಾದ ಪ್ರತಿ ಮನೆಯಲ್ಲೂ ಹಸುಗಳು ಇವೆ. ಪ್ರತಿ ಮನೆಯಲ್ಲೂ ಹಾಲು ಉತ್ಪಾದನೆ ಮತ್ತು ಪ್ರಾಣಿಗಳ ಪಾಲನೆ ಇದ್ದು, ಅವರ ಆರ್ಥಿಕತೆಯನ್ನು ಸದೃಢಗೊಳಿಸಿದೆ ಎಂದು ಪ್ರಧಾನಿ ಹೇಳಿದರು.
ಪರಿಸರ ಮತ್ತು ಪ್ರಾಣಿ-ಪಕ್ಷಿಗಳು ಭಾರತೀಯ ಆರ್ಥಿಕತೆಗೆ ಬಹಳ ಮುಖ್ಯವಾದುವು. ಇವೆರಡನ್ನೂ ಬ್ಯಾಲೆನ್ಸ್ ಮಾಡಿದರೆ ನೂತನ ಮತ್ತು ಸದೃಢ ಭಾರತವನ್ನು ನಿರ್ಮಿಸಲು ಸಾಧ್ಯವಿದೆ. ಈ ಬಗ್ಗೆ ಎಲ್ಲರೂ ಗಮನಹರಿಸಬೇಕಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ