ಜಿಂದ್: ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವುದು ದೇಶದ ಏಕತೆ ಹಾಗೂ ಸಮಗ್ರತೆಗೆ ದೊಡ್ಡ ಮೈಲುಗಲ್ಲು ಆಗಿದ್ದು, ಆ ರಾಜ್ಯ ಅಭಿವೃದ್ಧಿಯಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಹರಿಯಾಣದ ಜಿಂದ್ ನಲ್ಲಿಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮೋದಿ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ 75 ದಿನಗಳಲ್ಲಿಯೇ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮೋಟಿನ ಕಾರಣದಿಂದಾಗಿ ಕಾಂಗ್ರೆಸ್ 72 ವರ್ಷ ಆಳ್ವಿಕೆ ನಡೆಸಿದ್ದರೂ ಇದನ್ನು ತೆಗೆದಿರಲಿಲ್ಲ ಎಂದು ಆರೋಪಿಸಿದರು.
370 ವಿಧಿ ರದ್ದತಿಯಿಂದ ಜಮ್ಮು- ಕಾಶ್ಮೀರ ಹಾಗೂ ಲಡಾಖ್ ಅಭಿವೃದ್ದಿಯಾಗಲಿವೆ. ಈ ಪ್ರದೇಶ ಭಯೋತ್ಪಾದನೆಯಿಂದ ಮುಕ್ತವಾಗಲಿದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಜಮ್ಮು- ಕಾಶ್ಮೀರ, ಲೇಹ್, ಲಡಾಖ್ ಪ್ರದೇಶಗಳ ಅಭಿವೃದ್ದಿಯಾಗಲಿದೆ ಎಂದು ಅವರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಸ್ತಾಪಿಸಿರುವ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ಹುದ್ದೆಗಯಿಂದ ದೇಶದ ಭದ್ರತಾ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದೆ ಎಂದರು.
1999ರ ಕಾರ್ಗಿಲ್ ಯುದ್ಧದ ನಂತರ ದೇಶದ ಭದ್ರತಾ ವ್ಯವಸ್ಥೆ ಬಗ್ಗೆ ಎಚ್ಚೆತ್ತುಕೊಳ್ಳಲು ರಚಿಸಲಾದ ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಈ ಹುದ್ದೆಯನ್ನು ಸೃಷ್ಟಿಸಲಾಗುತ್ತಿದೆ. ಇವರು ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರಾಗಲಿದ್ದು, ಸರ್ಕಾರ ಮತ್ತು ಸೇನೆ ನಡುವೆ ಸಮನ್ವಯತೆ ಸಾಧಿಸಲಿದ್ದಾರೆ. ರಕ್ಷಣಾ ವಿಚಾರಗಳಲ್ಲಿ ಪ್ರಧಾನಿಗೆ ಸಲಹೆ ನೀಡಲಿದ್ದಾರೆ ಎಂದು ಅವರು ಹೇಳಿದರು.
Advertisement