ರಾಹುಲ್ ಬಜಾಜ್ ಹಾಗೂ ಅಮಿತ್ ಶಾ
ರಾಹುಲ್ ಬಜಾಜ್ ಹಾಗೂ ಅಮಿತ್ ಶಾ

ಕೇಂದ್ರ ಸರ್ಕಾರವನ್ನು ಟೀಕಿಸಲು ಜನರು ಹೆದರುತ್ತಿದ್ದಾರೆ: ಮೋದಿ ಸರ್ಕಾರದ ಬಗ್ಗೆ ಉದ್ಯಮಿ ಬಜಾಜ್ ಕಳವಳ

ಕೈಗಾರಿಕೋದ್ಯಮಿ ಮತ್ತು ಬಜಾಜ್ ಸಮೂಹದ ಅಧ್ಯಕ್ಷ ರಾಹುಲ್ ಬಜಾಜ್ ಅವರು ಶನಿವಾರ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಕೇಂದ್ರ ಸರ್ಕಾರವನ್ನು ಟೀಕಿಸಲು ಜನತೆ ಭಯಪಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. 
Published on

ಮುಂಬೈ: ಕೈಗಾರಿಕೋದ್ಯಮಿ ಮತ್ತು ಬಜಾಜ್ ಸಮೂಹದ ಅಧ್ಯಕ್ಷ ರಾಹುಲ್ ಬಜಾಜ್ ಅವರು ಶನಿವಾರ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಕೇಂದ್ರ ಸರ್ಕಾರವನ್ನು ಟೀಕಿಸಲು ಜನತೆ ಭಯಪಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಲು ಭಯದಿಂದ ಹಿಂಜರಿಯುತ್ತಿದ್ದಾರೆಂದು ಬಜಾಜ್ ಹೇಳಿದ್ದಾಗಿ ದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಮುಂಬೈನಲ್ಲಿ ನಡೆದ ದಿ ಎಕನಾಮಿಕ್ ಟೈಮ್ಸ್ ’ಇಟಿ ಅವಾರ್ಡ್ಸ್ 2019 ಕಾರ್ಯಕ್ರಮದಲ್ಲಿ ಉದ್ಯಮಿ ಬಜಾಜ್ ಈ ಮಾತನ್ನಾಡಿದ್ದು ಈ ಕಾರ್ಯಕ್ರಮದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಸಹ ಭಾಗವಹಿಸಿದ್ದು ಗಮನಾರ್ಹ ಅಂಶ.

ಯುಪಿಎ- 2 ಮನಮೋಹನ್ ಸಿಂಗ್ ಸರ್ಕಾರದಲ್ಲಿ ಎಲ್ಲರನ್ನೂ ಟೀಕಿಸಬಹುದಾಗಿತ್ತು. ಆದರೆ ಈಗ ಮೋದಿ ಸರ್ಕಾರವನ್ನು ಟೀಕಿಸಲು ಆಗದ ವಾತಾವರಣ ನಿರ್ಮಾಣವಾಗಿದೆ.ಒಂದೊಮ್ಮೆ ನಿಂದಿಸಿದ್ದಾದರೆ ನೀವು ನಮ್ಮನ್ನು ಪ್ರಶಂಸಿಸುತ್ತೀರಿ ಎನ್ನುವ ಯಾವ ಭರವಸೆ ಇಲ್ಲ. ನನ್ನ ತಪ್ಪು ಕಲ್ಪನೆ ಇದಾಗಲಿಕ್ಕೂ ಸಾಕು ಆದರೆ ಉದ್ಯಮ ವಲಯದ ಬಹುತೇಕರು ಹೀಗೆಂದು ಭಾವಿಸಿದ್ದಾರೆ ಎಂದು ಬಜಾಜ್ ಹೇಳಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ್ ಮಂಗಲಂ ನಿರ್ಲಾ, ಮತ್ತು ಭಾರ್ತಿ ಎಂಟರ್‌ಪ್ರೈಸಸ್ ಅಧ್ಯಕ್ಷ ಸುನಿಲ್ ಭಾರತಿ ಮಿತ್ತಲ್ ಸೇರಿದಂತೆ ಹಲವಾರು ಕೈಗಾರಿಕೋದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಹಾತ್ಮ ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆ ಕುರಿತು ಲೋಕಸಭೆಯಲ್ಲಿ ಭೋಪಾಲ್ ಸ<ಸದೆ  ಪ್ರಜ್ಞಾ ಸಿಂಗ್ ಠಾಕೂರ್ ಹೇಳಿಕೆಯನ್ನು ಉಲ್ಲೇಖಿಸಿದ ಬಜಾಜ್ ಕ್ಷಮಿಸಲು ಸಾಧ್ಯವಿಲ್ಲದ ಹೇಳಿಕೆ ನೀಡಿದ್ದರೂ ಅವರನ್ನು ರಕ್ಷಣಾ ಸಮಿತಿಯಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಹೇಳಿದರು. 

ವಿವಾದಾತ್ಮಕ ಹೇಳಿಕೆಗಳಿಗಾಗಿ ಠಾಕೂರ್ ಶುಕ್ರವಾರ ಲೋಕಸಭೆಯಲ್ಲಿ ಕ್ಷಮೆಯಾಚಿಸಿದ್ದಾರೆ, ಅವರು "ನಾಥುರಾಮ್ ಗೋಡ್ಸೆಯನ್ನು" ದೇಶಭಕ್ತ "ಎಂದು ಕರೆಯಲಿಲ್ಲ" ಎಂದು ಹೇಳಿದರು. ತನ್ನ ಹೇಳಿಕೆಯನ್ನು "ವಿರೂಪಗೊಳಿಸಲಾಗಿದೆ" ಎಂದು ಆಕೆ ಹೇಳಿದ್ದು ತನ್ನ ಹೇಳಿಕೆಗಳಿಂದ ಯಾರ ಭಾವನೆಗಳನ್ನು ನೋಯಿಸಿದ್ದರೆ ಕ್ಷಮೆಯಾಚಿಸುವುದಾಗಿ ಹೇಳಿದ್ದರು.

ಇನ್ನು ದೇಶದಲ್ಲಿ ಗುಂಪುಹತ್ಯೆಗಳು ಹೆಚ್ಚುತ್ತಿದೆ ಎಂದು ಹೇಳಿದ ಉದ್ಯಮಿ  "ನಾವು ಕೆಲವು ವಿಷಯಗಳನ್ನು ಹೇಳಲು ಬಯಸುವುದಿಲ್ಲ ಆದರೆ ಇಲ್ಲಿಯವರೆಗೆ ಯಾರೂ ಶಿಕ್ಷೆಗೊಳಗಾಗಲಿಲ್ಲ ಎನ್ನುವುದನ್ನು ನಾನು ಗಮನಿಸಿದ್ದೇನೆ" ಎಂದಿದ್ದಾರೆ.

ರಾಹುಲ್ ಬಜಾಜ್ ಅವರ ಪ್ರಶ್ನೆಗಳಿಗೆ, ಸಂದೇಹಗಳಿಗೆ ಅದೇ ಸಭೆಯಲ್ಲಿ ಭಗವಹಿಸಿದ್ದ ಅಮಿತ್ ಶಾ ಸಹ ಉತ್ತರಿಸಿದ್ದಾರೆ. "ಸರ್ಕಾರದ ವಿರುದ್ಧ ಟೀಕಿಸಲು ಯಾರೂ ಭಯಪಡುವ ಅಗತ್ಯವಿಲ್ಲ. ಅಂತಹ ಪರಿಸ್ಥಿತಿ ಅಸ್ತಿತ್ವದಲ್ಲಿದ್ದರೆ ಅದನ್ನು ಸುಧಾರಿಸಲು ಆಡಳಿತವು ಕೆಲಸ ಮಾಡುತ್ತದೆ. ನಮ್ಮ ಸರ್ಕಾರ ಪಾರದರ್ಶಕವಾಗಿದೆ, ವಿರೋಧದ ಬಗೆಗೆ ಆತಂಕವಿಲ್ಲ ಎಂದು ಶಾ ಹೇಳಿದ್ದಾರೆ.

ಇನ್ನು ಠಾಕೂರ್ ಅವರ ಹೇಳಿಕೆ ಖಂಡಿಸಿದ ಶಾ ಸಂಸದೆಯ ಹೇಳಿಕೆ ಸರ್ಕಾರ ಅಥವಾ ಕೇಸರಿ ಪಕ್ಷದ ಹೇಳಿಕೆಯಲ್ಲ, ಅದು ಅವರ ವೈಯುಕ್ತಿಕ ಹೇಳಿಕೆ. ಅದಕ್ಕಾಗಿ ಆಕೆ ಅದಾಗಲೇ ಕ್ಷಮೆ ಕೇಳಿದ್ದಾರೆ ಎಂದರು.

ಇನ್ನು ಗುಂಪುಹತ್ಯೆಯನ್ನು ಉದ್ದೇಶಿಸಿ ಮಾತಮಾಡಿದ ಶಾ ಈ ಹಿಂದೆ ಸಹ ಗುಂಪುಹತ್ಯೆ ನಡೆದಿದ್ದವು.ಆದರೆ ಈಗ ಕಡಿಮೆಯಾಗಿದೆ. ಆರೋಪಿಯನ್ನು ಶಿಕ್ಷೆಗೊಳಪಡಿಸಿದ ಪ್ರಕರಣಗಳನ್ನು ಮಾಧ್ಯಮಗಳು ವರದಿ ಮಾಡಿಲ್ಲ ಎಂದಿದ್ದಾರೆ.

ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನ ಅಂಕಿಅಂಶಗಳನ್ನು ಕೇಂದ್ರವು ಬಿಡುಗಡೆ ಮಾಡಿದ ಒಂದು ದಿನದ ನಂತರ ಬಜಾಜ್ ತಮ್ಮ ಕಳವಳವನ್ನು ಹೊರಹಾಕಿದ್ದಾರೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನ  (ಜಿಡಿಪಿ)  4.5% ಕ್ಕೆ ಕುಸಿದಿದೆ ಎಂದು ಕೇಂದ್ರದ ಅಂಕಿಅಂಶಗಳು ಉಲ್ಲೇಖಿಸಿದೆ.ಇದು ಆರು ವರ್ಷಗಳಿಗಿಂತಲೂ ಕಡಿಮೆ ಬೆಳವಣಿಗೆಯ ದರವಾಗಿದೆ ಮತ್ತು ನಿಧಾನಗತಿಯ ಆರನೇ ನೇರ ತ್ರೈಮಾಸಿಕವಾಗಿದೆ.

ಅಂಕಿಅಂಶಗಳು ಬಿಡುಗಡೆಯಾದ ಕೆಲವೇ ಗಂಟೆಗಳ ನಂತರ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾತನಾಡಿ . "ನಮ್ಮ ಆರ್ಥಿಕತೆಯು ವಾರ್ಷಿಕ 8% ರಷ್ಟು ಪ್ರಗತಿ ದಾಖಲಿಸಲು ನಾವು ನಮ್ಮ ಸಮಾಜದಲ್ಲಿ ಪ್ರಸ್ತುತ ಹರಡಿರುವ ಭಯವನ್ನು ತೊಡೆದುಹಾಕಿ ವಿಶ್ವಾಸ ಮೂಡಿಸಬೇಕಿದೆ" ಎಂದಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com