ಸಂವಿಧಾನ ಧ್ವಂಸಗೊಳಿಸಲಾಗುತ್ತಿದೆ, ಕೋರ್ಟ್ ಪೌರತ್ವ ತಿದ್ದುಪಡಿ ಮಸೂದೆ ತಿರಸ್ಕರಿಸುತ್ತೆ: ಚಿದಂಬರಂ

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ದೇಶದ ಹಲವು ರಾಜ್ಯಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದ್ದು, ಮತ್ತೊಂದೆಡೆ ರಾಜ್ಯಸಭೆಯಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದೆ.
ಚಿದಂಬರಂ
ಚಿದಂಬರಂ
Updated on

ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ದೇಶದ ಹಲವು ರಾಜ್ಯಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದ್ದು, ಮತ್ತೊಂದೆಡೆ ರಾಜ್ಯಸಭೆಯಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದೆ.

ಇಂದು ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು, ಕೇಂದ್ರ ಸರ್ಕಾರ ಹಿಂದುತ್ವ ಅಜೆಂಡಾ ಇಟ್ಟುಕೊಂಡು ಈ ಮಸೂದೆ ಮಂಡಿಸಿದೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.

ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನದ ಮೂಲ ಸ್ವರೂಪಕ್ಕೆ ವಿರುದ್ಧವಾಗಿದ್ದು, ಸಂವಿಧಾನವನ್ನು ಒಳಗಿನಿಂದಲೇ ಧ್ವಂಸಗೊಳಿಸಲಾಗುತ್ತಿದೆ. ಇದರ ವಿರುದ್ಧ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ. ಕೋರ್ಟ್ ಈ ಮಸೂದೆಯನ್ನು ತಿರಸ್ಕರಿಸಲಿದೆ ಎಂದು ಚಿದಂಬರಂ ಹೇಳಿದ್ದಾರೆ.

1. ಆಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಈ ಮೂರು ದೇಶಗಳನ್ನು ಹೇಗೆ ಗುಂಪು ಮಾಡುತ್ತೀರಿ?
2. ನೀವು ಆರು ಧರ್ಮಗಳನ್ನು ಹೇಗೆ ಗುಂಪು ಮಾಡುತ್ತೀರಿ ಮತ್ತು ಇತರರನ್ನು ಹೇಗೆ ಹೊರಗಿಡುತ್ತೀರಿ?
3. ನೀವು ಶ್ರೀಲಂಕಾದ ಹಿಂದೂಗಳು ಮತ್ತು ಭೂತಾನ್ ಕ್ರಿಶ್ಚಿಯನ್ನರನ್ನು ಏಕೆ ಹೊರಗಿಟ್ಟಿದ್ದೀರಿ?
4. ಧಾರ್ಮಿಕ ಕಿರುಕುಳ ಮಾತ್ರ ಏಕೆ? ಸಿದ್ಧಾಂತದ ಆಧಾರದ ಮೇಲೆ ಜನರು ಕಿರುಕುಳಕ್ಕೊಳಗಾಗುವುದಿಲ್ಲವೇ?
5. ಈ ಮಸೂದೆ ಸಂವಿಧಾನದ ಮೂಲ ಸ್ವರೂಪವನ್ನು ಉಲ್ಲಂಘಿಸುವುದಿಲ್ಲವೇ?

ನನ್ನ ಈ ಪ್ರಶ್ನೆಗಳಿಗೆ ಯಾರಾದರೂ ಉತ್ತರಿಸಬೇಕು ಎಂದು ಚಿದಂಬರಂ ಅವರು ಆಗ್ರಹಿಸಿದರು.

ಬಳಿಕ ಮಾತನಾಡಿದ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು, ನೀವು ದೇಶದ ಭವಿಷ್ಯವನ್ನು ಹಾಳು ಮಾಡುತ್ತಿದ್ದೀರಿ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ದೇಶದ ಮುಸ್ಲಿಮರು ನಿಮಗೆ ಹೆದರುವುದಿಲ್ಲ. ಈ ದೇಶದ ಸಂವಿಧಾನಕ್ಕೆ ಹೆದರುತ್ತಿದ್ದಾರೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿನ ಹಿಂದೂಗಳಿಗೆ ಧರ್ಮದ ಆಧಾರದಲ್ಲಿ ಕಿರುಕುಳ ನೀಡಲಾಗಿದೆ ಎಂದು ನಿಮಗೆ ಹೇಳಿದವರು ಯಾರು? ಈ ಬಗ್ಗೆ ನಿಮ್ಮ ಬಳಿ ಸಾಕ್ಷ್ಯಾಧಾರಗಳು ಇವೆಯೇ? ಎಂದು ಕಪಿಲ್ ಸಿಬಲ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನೇರವಾಗಿಯೇ ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com