ಅಸ್ಸಾಂನಲ್ಲಿ ಪರಿಸ್ಥಿತಿ ನಿಯಂತ್ರಣ, ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಮುಂದುವರೆದ ಪ್ರತಿಭಟನೆ

ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಮುಂದುವರೆದ ಪ್ರತಿಭಟನೆಗಳಿಂದ ಅಸ್ಸಾಂನಲ್ಲಿ ಪರಿಸ್ಥಿತಿ ಉದ್ರಿಕ್ತವಾಗಿದ್ದರೂ ನಿಯಂತ್ರಣದಲ್ಲಿದೆ.
ಗುವಾಹತಿಯಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ
ಗುವಾಹತಿಯಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ

ಗುವಾಹತಿ/ತೇಜ್‍ಪುರ್: ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಮುಂದುವರೆದ ಪ್ರತಿಭಟನೆಗಳಿಂದ ಅಸ್ಸಾಂನಲ್ಲಿ ಪರಿಸ್ಥಿತಿ ಉದ್ರಿಕ್ತವಾಗಿದ್ದರೂ ನಿಯಂತ್ರಣದಲ್ಲಿದೆ.

ರಾಜ್ಯದ ವಿವಿಧೆಡೆ ಮಸೂದೆ ವಿರುದ್ಧ ಶಾಂತಿಯುತ ಪ್ರತಿಭಟನೆಗಳು ಮುಂದುವರೆದ ನಡುವೆಯೂ ಗುವಾಹತಿಯಲ್ಲಿ ಅನಿರ್ದಿಷ್ಟಾವಧಿ ಕಫ್ರ್ಯೂ ಮುಂದುವರೆದಿದೆ. ಆದರೆ ದಿಬ್ರೂಗಡದಲ್ಲಿ ಕೆಲ ತಾಸು ಕಫ್ರ್ಯೂ ಸಡಿಲಿಸಲಾಗಿದೆ. 

ಮೂರು ದಿನಗಳ ಹಿಂಸಾಚಾರ ಮತ್ತು ಉದ್ವಿಗ್ನತೆ ನಂತರ ಗುವಾಹತಿಯಲ್ಲಿ ಇಂದು ಬೆಳಿಗ್ಗೆಯಿಂದ ಜನರು ಅಗತ್ಯ ವಸ್ತುಗಳ ಖರೀದಿಗಾಗಿ ಹೊರಬರುವುದರೊಂದಿಗೆ ಜನಜೀವನ ಸಾಮಾನ್ಯ ಸ್ಥಿತಿಗೆ ಕ್ರಮೇಣ ಮರಳುತ್ತಿದೆ. 

ಪೆಟ್ರೋಲ್ ಬಂಕ್‍ಗಳು ಮತ್ತು ಎಟಿಎಂಗಳ ಮುಂದೆ ಜನರು ಸಾಲುಗಟ್ಟಿ ನಿಂತಿದ್ದರು. ಅಗತ್ಯ ವಸ್ತಗಳ ಲಭ್ಯತೆ ಕಡಿಮೆ ಇರುವುದರಿಂದ ಇವುಗಳ ಬೇಡಿಕೆ ಮತ್ತು ದರವೂ ಗಣನೀಯ ಏರಿಕೆಯಾಗಿದೆ. 

ಇದಲ್ಲದೆ, ಖಾಸಗಿ ವಾಹನಗಳು, ಸರ್ಕಾರಿ ಬಸ್‍ಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿವೆ. ಆದರೆ, ಎಲ್ಲ ಶೈಕ್ಷಣಿಕ ಸಂಸ್ಥೆಗಳು ಮತ್ತು ಕಚೇರಿಗಳನ್ನು ಮುಚ್ಚಲಾಗಿದೆ.

ದಿಬ್ರೂಗಡದಲ್ಲಿ ಕಫ್ರ್ಯೂ ಅನ್ನು ಬೆಳಿಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಸಡಿಲಿಸಲಾಗಿದ್ದು, ಕಳೆದ 24 ತಾಸಿನಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.  

ಸೊನಿತ್‍ಪುರ್ ಜಿಲ್ಲೆಯ ತೇಜ್‍ಪುರ್ ಮತ್ತು ದೆಕಿಯಾಜುಲಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಅನಿರ್ದಿಷ್ಟಾವಧಿ ಕಫ್ರ್ಯೂ ಅನ್ನು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ ಸಡಿಲಿಸಲಾಗಿದೆ ಎಂದು ಸೊನಿತ್‍ಪುರ್ ಉಪ ಆಯುಕ್ತ ಪ್ರತಾಪ್ ಸಿಂಗ್ ಹೇಳಿದ್ದಾರೆ. 

ತಿನ್‍ಸುಕಿಯಾ ಮತ್ತು ಜೊರ್‍ಹತ್ ನಲ್ಲಿ ರಾತ್ರಿ ಕಫ್ರ್ಯೂ ಮುಂದುವರೆದಿದೆ. ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರುವ ನಿಟ್ಟಿನಲ್ಲಿ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಪಡೆಗಳು ರಾಜ್ಯದ ವಿವಿಧೆಡೆ ಸ್ಥಳೀಯ ಆಡಳಿತಗಳಿಗೆ ನೆರವಾಗುತ್ತಿವೆ. 

ಸ್ಥಳೀಯ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅನೇಕ ದೂರದ ಸ್ಥಳಗಳ ರೈಲುಗಳು ಮತ್ತು ಬಸ್‍ಗಳ ಸಂಚಾರವನ್ನೂ ರದ್ದುಪಡಿಸಲಾಗಿದೆ. ಅಲ್ಲಲ್ಲಿ ಸಿಲುಕಿ ಬಿದ್ದಿರುವ ಪ್ರಯಾಣಿಕರಿಗಾಗಿ ಸಾರಿಗೆ ಇಲಾಖೆ ವಿಶೇಷ ವ್ಯವಸ್ಥೆ ಮಾಡಿದೆ. ರಾಜ್ಯಾದ್ಯಂತ ಡಿ 11ರಿಂದ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com