ಪೌರತ್ವ ಮಸೂದೆಯಿಂದ ಅಕ್ರಮ ವಲಸಿಗರ ಪ್ರವಾಹವಾಗುತ್ತೆ ಅಮಿತ್ ಶಾ ಗೆ ಮಿಜೋರಾಮ್ ಮುಖ್ಯಮಂತ್ರಿ
ಐಜ್ವಾಲ್: ಬಾಂಗ್ಲಾದೇಶ, ಅಫ್ಗಾನಿಸ್ಥಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ, ಪೌರತ್ವ (ತಿದ್ದುಪಡಿ) ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಮಿಜೋರಾಮ್ ಮುಖ್ಯಮಂತ್ರಿ ಜೋರಾಮ್ಥಾಂಗಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಸೂದೆ ಜಾರಿ ಮಾಡದಂತೆ ಒತ್ತಾಯಿಸಿದ್ದಾರೆ.
ಅಮಿತ್ ಶಾ ಗೃಹ ಸಚಿವರಾದ ನಂತರ ಇದೇ ಮೊದಲ ಬಾರಿಗೆ ಮಿಜೋರಾಂಗೆ ಭೇಟಿ ನೀಡಿದ್ದು, ಈ ವೇಳೆ ಮಿಜೋರಾಮ್ ಮುಖ್ಯಮಂತ್ರಿ ಜೋರಾಮ್ ಥಾಂಗಾ ಅಮಿತ್ ಶಾ ಅವರಿಗೆ ಪೌರತ್ವ ಮಸೂದೆ ಜಾರಿಗೆ ತರದಂತೆ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ಪೌರತ್ವ ಮಸೂದೆ ಜಾರಿ ತಂದದ್ದೇ ಆದಲ್ಲಿ ಮಿಜೋರಾಮ್ ನಲ್ಲಿ ವಲಸಿಗರ ಪ್ರವಾಹ ಉಂಟಾಗುತ್ತದೆ ಆದ್ದರಿಂದ ಮಿಜೋರಾಂ ಈ ಮಸೂದೆಯನ್ನು ವಿರೋಧಿಸುತ್ತದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಿಜೋರಾಂ ನ ವಿದ್ಯಾರ್ಥಿ ಸಂಘಟನೆಗಳು, ಎನ್ ಜಿಒಗಳ ಸದಸ್ಯರು ಸಹ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ಮಸೂದೆಯನ್ನು ಜಾರಿಗೆ ತರಬಾರದು ಒಂದು ವೇಳೆ ಜಾರಿಗೆ ತಂದರೂ ಮಿಜೋರಾಂ ಹಾಗೂ ಇನ್ನಿತರ ಈಶಾನ್ಯರಾಜ್ಯಗಳನ್ನು ಮಸೂದೆಯ ವ್ಯಾಪ್ತಿಯಿಂದ ಹೊರಗಿಡಬೇಕೆಂದು ಮನವಿ ಮಾಡಿದೆ. .
ಸಿಎಬಿಯನ್ನು ವಿರೋಧಿಸಿ ಬೃಹತ್ ಪ್ರತಿಭಟನೆಗೆ ಇಲ್ಲಿನ ಸಂಘಟನೆಗಳು ಕರೆ ನೀಡಿದ್ದವಾದರೂ ಅಮಿತ್ ಶಾ ಅವರೊಂದಿಗೆ ತಮ್ಮ ಬೇಡಿಕೆಗಳನ್ನು ಚರ್ಚಿಸುವ ಉದ್ದೇಶದಿಂದ ಪ್ರತಿಭಟನೆಯ ವಿಚಾರವನ್ನು ಕೈಬಿಡಲಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ