ಇಂದೋರ್: ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ, ನಾಲ್ವರ ವಿರುದ್ಧ ಎನ್ ಎಸ್ ಎ ಅಡಿ ಪ್ರಕರಣ ದಾಖಲು
ಭೂಪಾಲ್ : ಇಂದೂರ್ ನ ತಾತ್ಪಟ್ಟಿ ಬಖಾಲ್ ಪ್ರದೇಶದಲ್ಲಿ ಆರೋಗ್ಯ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ನಾಲ್ವರು ವಿರುದ್ಧ ಜಿಲ್ಲಾಡಳಿತ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಮಧ್ಯಪ್ರದೇಶದ ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಈ ರೀತಿಯ ಮೊದಲ ಬಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ಐವರು ಸದಸ್ಯರನ್ನೊಳಗೊಂಡ ತಂಡ ಬುಧವಾರ ಕೋವಿಡ್ -19 ರೋಗಿಗಳು ಹಾಗೂ ಕ್ವಾರೆಂಟೈನ್ ನಲ್ಲಿರುವವರ ಸಂಬಂಧಿಕರ ಭೇಟಿಗಾಗಿ ತಾತ್ಪಟ್ಟಿ ಬಖಾಲ್ ಪ್ರದೇಶಕ್ಕೆ ತೆರಳಿದ್ದಾಗ ಗುಂಪುದೊಂದು ಕಲ್ಲುಗಳಿಂದ ದಾಳಿ ನಡೆಸಿತ್ತು, ಇದರಿಂದಾಗಿ ಇಬ್ಬರು ಮಹಿಳಾ ವೈದ್ಯೆಯರು ಗಾಯಗೊಂಡಿದ್ದರು.
ಈ ಘಟನೆ ಸಂಬಂದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ನಾಲ್ವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಜಿಲ್ಲಾಡಳಿತ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲ್ಲೆ ಘಟನೆ ಸಂಬಂಧ ಆರು ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಇಂದೋರ್ ಛತ್ರಿಪುರ ಠಾಣೆ ಉಸ್ತುವಾರಿ ಕರಣ್ ಸಿಂಗ್ ಶಕ್ತಾವತ್ ಹೇಳಿದ್ದಾರೆ.
ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ಸೋಂಕಿಗೆ ಸಂಬಂಧಿಸಿದಂತೆ ವದಂತಿ ಹರಡುವಿಕೆ ಆರೋಪದ ಮೇಲೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ದಾಂಡೋಟಿಯಾ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ