ಸಂಬಂಧಿಕರು ಹಿಂಜರಿದಾಗ ಹಿಂದೂ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಹೆಗಲು ಕೊಟ್ಟ ಮುಸ್ಲಿಂ ಯುವಕರು!
ನವದೆಹಲಿ: ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ವಾಹನ ಸಿಗದೆ ಹಿಂದೂ ಮಹಿಳೆಯ ಮೃತದೇಹ ಕೊಂಡೊಯ್ಯಲು ಸಂಬಂಧಿಕರು ಹಿಂದೇಟು ಹಾಕಿದ್ದು, ಮುಸ್ಲಿಂ ಯುವಕರು ಮಹಿಳೆಯ ಚಟ್ಟಕ್ಕೆ ಹೆಗಲು ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಧ್ಯೆ ಪ್ರದೇಶದ ಇಂದೋರ್ ನಲ್ಲಿ ಈ ಘಟನೆ ನಡೆದಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ 65 ವರ್ಷದ ಮಹಿಳೆ ಮೃತಪಟ್ಟಿದ್ದು, ಮಹಿಳೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಕೊರೋನಾ ವೈರಸ್ ಸೋಂಕು ಹರಡುವ ಭೀತಿಯಿಂದ ಮಹಿಳೆಯ ಸಂಬಂಧಿಕರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿರಲಿಲ್ಲ. ಈ ವೇಳೆ ಮೃತ ಮಹಿಳೆಯ ಮಕ್ಕಳ ಸಹಾಯಕ್ಕೆ ಬಂದ ಅದೇ ಪ್ರದೇಶದ ಮುಸ್ಲಿಂ ಯುವಕರು ಮಹಿಳೆಯ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ಕೊಂಡೊಯ್ದು ಅಂತ್ಯ ಸಂಸ್ಕಾರಕ್ಕೆ ನೆರವಾಗಿದ್ದಾರೆ.
ಲಾಕ್ಡೌನ್ ಆಗಿದ್ದರಿಂದ ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ವಾಹನ ಸೌಲಭ್ಯ ಕೂಡಾ ದೊರಕಿರಲಿಲ್ಲ. ಈ ಸಂದರ್ಭದಲ್ಲಿ ಮಾಸ್ಕ್ ಧರಿಸಿದ ಯುವಕರು ಮಹಿಳೆಯ ಮೃತದೇಹಕ್ಕೆ ಹೆಗಲು ಕೊಟ್ಟು ಸುಮಾರು 2.5 ಕೀ.ಮೀ. ದೂರದಲ್ಲಿರುವ ಸ್ಮಶಾನಕ್ಕೆ ಸಾಗಿಸಿದರು.
ಮುಸ್ಲಿಂ ಯುವಕರು ಚಟ್ಟಾ ಹೊತ್ತು ಸಾಗುತ್ತಿರುವ ವಿಡಿಯೋ ಮತ್ತು ಫೋಟೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ