ನವದೆಹಲಿ: ಕೊರೋನಾ ಸಾಂಕ್ರಾಮಿಕ ರೋಗವನ್ನು ಹೊಡೆದೋಡಿಸಲು ತಮ್ಮೆಲ್ಲಾ ಶಕ್ತಿ ಸಾಮಾರ್ಥ್ಯ ಮೀರಿ ಶ್ರಮಿಸುತ್ತಿರುವ ವೈದ್ಯರು, ನೈರ್ಮಲ್ಯ ಕಾರ್ಮಿಕರು, ಪೊಲೀಸರು ಮತ್ತು ಈ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರನ್ನು ವೀಡಿಯೊ ಸಂದೇಶದ ಮೂಲಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶ್ಲಾಘಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವ ಕೆಲವೇ ಗಂಟೆಗಳ ಮೊದಲು, ವಿಡಿಯೋ ಸಂದೇಶ ನೀಡಿದ ಸೋನಿಯಾ ಗಾಂಧಿ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ವೈದ್ಯರು, ಪೊಲೀಸರು ಸೇರಿದಂತೆ ಸರ್ಕಾರಿ ಅಧಿಕಾರಿಗಳು ತೋರಿಸಿದ ಹಠಕ್ಕಿಂತ ದೊಡ್ಡ ದೇಶಭಕ್ತಿ ಇಲ್ಲ. ಆರೋಗ್ಯ ಬಿಕ್ಕಟ್ಟನ್ನು ನಾವು ಏಕತೆ, ಶಿಸ್ತು ಮತ್ತು ಆತ್ಮ ವಿಶ್ವಾಸದಿಂದ ಸೋಲಿಸುತ್ತೇವೆ. ತಾಳ್ಮೆ ಮತ್ತು ಪರಿಶ್ರಮಕ್ಕಾಗಿ ದೇಶವಾಸಿಗಳಿಗೆ ಧನ್ಯವಾದಗಳು ಈ ವೇಳೆ ತಿಳಿಸಿದರು.
ಸಂಪನ್ಮೂಲಗಳ ಕೊರತೆಯ ಹೊರತಾಗಿಯೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್ 19 ವಿರುದ್ಧ ಹೋರಾಡುತ್ತಿವೆ. ಈ ಯುದ್ಧವನ್ನು ಗೆಲ್ಲಲು ಜನರು ಸರ್ಕಾರಗಳೊಂದಿಗೆ ಸಹಕರಿಸಬೇಕು. ಜನರು ಮನೆಯೊಳಗೆ ಇದ್ದು ಲಾಕ್ ಡೌನ್ ನಿಯಮ ಪಾಲಿಸಬೇಕು. ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ.
Advertisement