ಇತ್ತೀಚೆಗಷ್ಟೇ ಲಾಕ್ ಡೌನ್ ಉಲ್ಲಂಘನೆ ಮಾಡಿ ಸುದ್ದಿಯಾಗಿದ್ದ ಡಿಹೆಚ್ಎಫ್ಎಲ್ ನ ಪ್ರೊಮೋಟರ್ ಗಳಾದ ಕಪಿಲ್ ಹಾಗೂ ಧೀರಜ್ ವಾಧ್ವಾನ್ ಅವರನ್ನು ಏ.26 ರಂದು ಸಿಬಿಐ ವಶಕ್ಕೆ ಪಡೆದಿದೆ.
ವಾಧ್ವಾನ್ ಸಹೋದರರು ಡಿಹೆಚ್ಎಫ್ಎಲ್ ಗೆ ಸಂಬಂಧಿಸಿದಂತೆ ಆರ್ಥಿಕ ಅಪರಾಧಗಳನ್ನು ಎಸಗಿದ, ಹಗರಣದ ಆರೋಪವಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಸಹೋದರರು ಫೆ.21 ರಿಂದ ಜಾಮೀನು ಪಡೆದು ಹೊರಗಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸಿಬಿಐ ಅವರಿಬ್ಬರನ್ನೂ ಮಹಾಬಲೇಶ್ವರದಲ್ಲಿ ವಶಕ್ಕೆ ಪಡೆದಿದ್ದು ಮುಂಬೈಗೆ ಕರೆತರಲಾಗುತ್ತಿದೆ.
ವಾಧ್ವಾನ್ ಸಹೋದರರನ್ನು ಸಿಬಿಐ ವಶಕ್ಕೆ ಪಡೆದು ಮುಂಬೈಗೆ ಕರೆತರಲಾಗುತ್ತಿರುವ ಬಗ್ಗೆ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ ಮುಖ್ ಟ್ವೀಟ್ ಮಾಡಿದ್ದಾರೆ. ಸಿಬಿಐಗೆ ಸ್ಥಳೀಯ ಸತಾರಾ ಜಿಲ್ಲಾ ಪೊಲೀಸರು ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.
ಇದೇ ವೇಳೆ ವಾಧ್ವಾನ್ ಸಹೋದರರು ಲಾಕ್ ಡೌನ್ ಉಲ್ಲಂಘಿಸಿದ್ದ ಪ್ರಕರಣದ ತನಿಖೆಯೂ ಮುಕ್ತಾಯಗೊಂಡಿದೆ. ಏ.09 ರಂದು ಲಾಕ್ ಡೌನ್ ನ್ನು ಉಲ್ಲಂಘಿಸಿ 21 ಸದಸ್ಯರಿದ್ದ ಕುಟುಂಬದ ಜೊತೆ ಪುಣೆಯಿಂದ ಸತಾರಾದಲ್ಲಿರುವ ಮಹಾಬಲೇಶ್ವರ್ ಗೆ ಇಬ್ಬರೂ ಸಹೋದರರು ಭೇಟಿ ನೀಡಿದ್ದರು. ಇದು ದೊಡ್ಡ ವಿವಾದ ಉಂಟುಮಾಡಿತ್ತು. ವಾಧ್ವಾನ್ ಕುಟುಂಬದವರು ಸಂಚರಿಸಲು ಏ.08 ರಂದು ಐಪಿಎಸ್ ಅಧಿಕಾರಿ ಅಮಿತಾಬ್ ಗುಪ್ತಾ ಅನುಮತಿ ನೀಡ್ದಿದರು. ಈ ವಿಷಯ ಚರ್ಚೆಯಾಗುತ್ತಿದ್ದಂತೆಯೇ ಎಚ್ಚೆತ್ತ ಮಹಾರಾಷ್ಟ್ರ ಸರ್ಕಾರ ಏ.10 ರಂದು ಅಧಿಕಾರಿಯನ್ನು ಕಡ್ಡಾಯ ರಜೆ ಮೇಲೆ ಕಳಿಸಿತ್ತು. ಈಗ ಈ ಪ್ರಕರಣದ ತನಿಖೆಯೂ ಪೂರ್ಣಗೊಂಡಿದೆ, ಶೀಘ್ರವೇ ಅಧಿಕಾರಿಗಳು ವರದಿ ಸಲ್ಲಿಸಲಿದ್ದಾರೆ ಎಂದು ಗೃಹ ಸಚಿವರು ಮಾಹಿತಿ ನೀಡಿದ್ದಾರೆ.
Advertisement
Advertisement