ಅಯೋಧ್ಯೆ: ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ತಯಾರಿಗಳು ಮುಕ್ತಾಯಗೊಂಡಿದ್ದು ಧಾರ್ಮಿಕ ವಿಧಿವಿಧಾನಗಳಿಗೆ ಸಕಲವೂ ಸಿದ್ಧಗೊಂಡಿದೆ. ಉತ್ತರ ಪ್ರದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಯೋಗಿ ಆದಿತ್ಯನಾಥ್ ಸ್ವತಃ ಕಾರ್ಯಕ್ರಮಗಳ ತಯಾರಿಯ ಮೇಲ್ವಿಚಾರಣೆ ನಡೆಸಿದ್ದಾರೆ.
ಆ.03 ರಂದು 12 ಮಂದಿ ಪುರೋಹಿತರು ಗಣೇಶನಿಗೆ ಪೂಜೆ, ಪ್ರಾರ್ಥನೆ ಸಲ್ಲಿಸುವುದರ ಮೂಲಕ ರಾಮ ಮಂದಿರ ಭೂಮಿ ಪೂಜೆಯ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಿದ್ದಾರೆ.
ಆ.04 ರಂದು ಅಯೋಧ್ಯೆಯ ಹನುಮಗರ್ಹಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಭಾಗಿಯಾಗಲು 200 ಜನ ಗಣ್ಯ ಅತಿಥಿಗಳಿಗೆ ಮಾತ್ರ ಆಹ್ವಾನ ನೀಡಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ 175 ಜನ ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಈ ಪೈಕಿ ವಿವಿಧ ಪಂಥ, ಸಂಪ್ರದಾಯಗಳಿಗೆ ಸೇರಿದ 135 ಸಂತರನ್ನು ಆಹ್ವಾನಿಸಲಾಗಿದೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಹೆಚ್ಚಿನ ಜನ ಭಾಗವಹಿಸದೇ ಇರುವ ಪರಿಸ್ಥಿತಿ ಉಂಟಾಗಿರುವುದರಿಂದ ಅಯೋಧ್ಯೆಯ ಹೊರಗಿರುವ ಭಕ್ತಾದಿಗಳಿಗೆ ತಾವಿರುವಲ್ಲಿಯೇ ಭಜನೆ, ಕೀರ್ತನೆಗಳ ಮೂಲಕ ರಾಮನನ್ನು ಪ್ರಾರ್ಥಿಸುವಂತೆ ಟ್ರಸ್ಟ್ ಮನವಿ ಮಾಡಿದೆ.
Advertisement