ಜೈಪುರ: ಪಕ್ಷದೊಳಗಿನ ಸಚಿನ್ ಪೈಲಟ್ ಬಂಡಾಯದ ಬಿಕ್ಕಟ್ಟು ಶಮನಗೊಂಡು ಎಲ್ಲವೂ ಸರಿಯಾಯಿತು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ನಿಟ್ಟುಸಿರು ಬಿಡುತ್ತಿರುವಂತೆಯೇ ಬಿಜೆಪಿ ಹೊಸ ಬಾಣ ಹೂಡುತ್ತಿದೆ. ರಾಜಸ್ಥಾನ ಕಾಂಗ್ರೆಸ್ ಸರ್ಕಾರದ ವಿರುದ್ಧ ಶುಕ್ರವಾರ ಅವಿಶ್ವಾಸ ನಿರ್ಣಯವನ್ನು ಬಿಜೆಪಿ ಮಂಡಿಸಲಿದೆ ಎಂದು ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಕಠಾರಿಯಾ ತಿಳಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡಾ ಅಧಿವೇಶನದ ಆರಂಭದಲ್ಲೇ ವಿಶ್ವಾಸ ಮತ ಯಾಚನೆ ನಿರ್ಣಯ ಮಂಡಿಸಲಿದೆ. ಈ ಕುರಿತು ಗೆಹ್ಲೋಟ್ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ . ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ, ಪೈಲಟ್ ಬೆಂಬಲಿಗರಾಗಿದ್ದ ಶಾಸಕರಾದ ಭನ್ವರ್ಲಾಲ್ ಶರ್ಮಾ ಹಾಗೂ ವಿಶ್ವೇಂದ್ರ ಸಿಂಗ್ ಅವರ ಅಮಾನತು ಆದೇಶವನ್ನು ಕಾಂಗ್ರೆಸ್ ಗುರುವಾರ ರದ್ದುಗೊಳಿಸಿದೆ.
ಅಶೋಕ್ ಗೆಹ್ಲೋಟ್ ಸರ್ಕಾರ ದ್ವಂದ್ವಗಳ ಸರ್ಕಾರವಾಗಿದೆ ಎಂದು ಟೀಕಿಸಿದ ಪೂನಿಯಾ, ರಾಜಸ್ಥಾನದ ಕಾಂಗ್ರೆಸ್ನೊಳಗಿನ ರಾಜಕೀಯ ಬಿಕ್ಕಟ್ಟು ಶಮನಗೊಂಡಂತೆ ತೋರುತ್ತಿದೆಯಾದರೂ ಆ ಪಕ್ಷದಲ್ಲಿ ಎಲ್ಲವೂ ಸರಿ ಇದೆ ಎಂಬಂತಿಲ್ಲ. ಹಗ್ಗ-ಜಗ್ಗಾಟ ನಡೆದಿದೆ. ಒಬ್ಬರು ಅತ್ತ ಎಳೆಯುತ್ತಿದ್ದರೆ, ಇನ್ನೊಬ್ಬರು ಇತ್ತ ಎಳೆಯುತ್ತಿದ್ದಾರೆ. ಶುಕ್ರವಾರ ಅವಿಶ್ವಾಸ ನಿರ್ಣಯ ಮಂಡಿಸುತ್ತೇವೆ ಎಂದರು.
ಸರ್ಕಾರ ಅಸ್ಥಿರವಾಗಿದ್ದು ಜನರ ಕೆಲಸಗಳು ಆಗುತ್ತಿಲ್ಲ. ಅವಿಶ್ವಾಸ ನಿರ್ಣಯಕ್ಕೆ ನಾವು ಸಿದ್ಧತೆ ಮಾಡಿಕೊಂಡಿದ್ದೆವು. ಇವತ್ತು ಸಭೆಯಲ್ಲಿ ಎಲ್ಲಾ ಶಾಸಕರ ಜೊತೆ ಸಮಾಲೋಚನೆ ಮಾಡಿ ಅಂತಿಮ ನಿರ್ಧಾರಕ್ಕೆ ಬರಲಾಯಿತು ಎಂದು ದಿಲಾವರ್ ತಿಳಿಸಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಾಯಕತ್ವವನ್ನು ಬಹಿರಂಗವಾಗಿಯೇ ಟೀಕಿಸಿ ಬಂಡಾಯವೆದ್ದಿದ್ದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, ಮತ್ತೆ ಕಾಂಗ್ರೆಸ್ ತೆಕ್ಕೆಗೆ ಮರಳಿದ್ದು, ಗುರುವಾರ ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ತಿಂಗಳ ಬಳಿಕ ಪರಸ್ಪರ ಭೇಟಿಯಾದರು
Advertisement