ತೂತುಕುಡಿ ಸ್ಟೆರಿಲೈಟ್ ಘಟಕ ಪುನಾರಂಭಕ್ಕೆ ಮದ್ರಾಸ್ ಹೈಕೋರ್ಟ್ ತಿರಸ್ಕಾರ
ಚೆನ್ನೈ: ತೂತುಕುಡಿಯ ಸ್ಟೈರ್ಲೈಟ್ ತಾಮ್ರ ಘಟಕವನ್ನು ಪುನರಾರಂಭಿಸಲು ಮದ್ರಾಸ್ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ. ವೇದಾಂತ ಲಿಮಿಟೆಡ್ ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ತಳ್ಳಿಹಾಕಿದೆ.
ನ್ಯಾಯಮೂರ್ತಿಗಳಾದ ಟಿ ಎಸ್ ಶಿವಗ್ನನಮ್ ಮತ್ತು ವಿ ಭವಾನಿ ಸುಬ್ಬರೋಯನ್ ನೇತೃತ್ವದ ಇಬ್ಬರು ಸದಸ್ಯರನ್ನೊಳಗೊಂಡ ನ್ಯಾಯಪೀಠ, ಮಾರ್ಚ್ 11ರಂದೇ ಆದೇಶ ಹೊರಡಿಸಬೇಕಾಗಿತ್ತು. ಆದರೆ ಕೋವಿಡ್-19 ಸಾಂಕ್ರಾಮಿಕದಿಂದ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಕೋರ್ಟ್ ಕಲಾಪಕ್ಕೆ ರಜೆಯಿದ್ದುದರಿಂದ ಆದೇಶ ನೀಡಲು ವಿಳಂಬವಾಯಿತು. 815 ಪುಟಗಳ ತೀರ್ಪನ್ನು ಈ ಮಧ್ಯೆ ತಯಾರು ಮಾಡಲಾಗಿತ್ತು ಎಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಇಂದು ತೀರ್ಪು ನೀಡಿ ಹೇಳಿದ್ದಾರೆ.
ವೇದಾಂತ ಲಿಮಿಟೆಡ್ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿರುವುದರಿಂದ ಅಲ್ಲಿಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ಸಹ ನ್ಯಾಯಾಧೀಶರು ನಿರಾಕರಿಸಿದರು.
ಪರಿಸರ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ತೂತುಕುಡಿ ತಾಮ್ರ ಘಟಕಕ್ಕೆ 2018ರಲ್ಲಿ ಪರವಾನಗಿ ನವೀಕರಣ ಮಾಡಲು ತಮಿಳು ನಾಡು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿರಸ್ಕರಿಸಿತ್ತು. ನಂತರ ಮೇ 2018ರಲ್ಲಿ ತಮಿಳುನಾಡು ಸರ್ಕಾರ ಘಟಕವನ್ನು ಮುಚ್ಚುವಂತೆ ಆದೇಶ ನೀಡಿತ್ತು.
ಘಟಕವನ್ನು ತೆರೆಯಲು ಅವಕಾಶ ನೀಡುವಂತೆ ವೇದಾಂತ ಲಿಮಿಟೆಡ್ ನ್ಯಾಯಾಲಯದ ಮೊರೆ ಹೋಗಿತ್ತು.