ನವದೆಹಲಿ: ಆಯುಷ್ ಇಲಾಖೆಯ ಕಾರ್ಯದರ್ಶಿಯ ನಡೆಯೊಂದು ವಿವಾದಕ್ಕೆ ಗುರಿಯಾಗಿದ್ದು, ಅವರ ವಿರುದ್ಧ ಕ್ರಮ ಜರುಗಿಸುವಂತೆ ಕಾಂಗ್ರೆಸ್ ನ ಸಂಸದರಾದ ಜ್ಯೋತಿಮಣಿ ಆಗ್ರಹಿಸಿದ್ದಾರೆ.
ಆಯುಷ್ ಸಚಿವ ಶ್ರೀಪಾದ್ ನಾಯ್ಕ್ ಗೆ ಪತ್ರ ಬರೆದಿರುವ ಜ್ಯೋತಿ ಮಣಿ, ಹಿಂದಿ ಬಾರದೆಂಬ ಕಾರಣಕ್ಕಾಗಿ ಕೇಂದ್ರ ಆಯುಷ್ ಸಚಿವಾಲಯದ ಕಾರ್ಯದರ್ಶಿಗಳು, ತಮಿಳುನಾಡಿನಿಂದ ನ್ಯೂರೋಪತಿ ಪ್ರಾಕ್ಟೀಷನರ್ಸ್ ನ್ನು ಆನ್ ಲೈನ್ ಆಯುಷ್ ಸಚಿವಾಲಯದ ಕಾರ್ಯಕ್ರಮದಿಂದ ಹೊರ ಹೋಗುವಂತೆ ಕೇಳಿದ್ದಾರೆ ಎಂದು ಆರೋಪಿಸಿದ್ದಾರೆ.
ಸೆಷನ್ ನ್ನು ಇಂಗ್ಲೀಷ್ ನಲ್ಲಿ ನಡೆಸದೇ ಹಿಂದಿಯಲ್ಲಿ ನಡೆಸುತ್ತಿರುವುದಕ್ಕೆ ಈ ಹಿಂದೆಯೇ ನ್ಯೂರೋಪತಿ ಪ್ರಾಕ್ಟೀಷನರ್ ಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ ಸಹ ಹಿಂದಿ ತಿಳಿಯದೇ ಇರುವವರು ಕಾರ್ಯಕ್ರಮದಿಂದ ಹೊರನಡೆಯಿರಿ ಎಂದು ಹೇಳುವ ಮೂಲಕ ಅವಮಾನ ಮಾಡಲಾಗಿದೆ ಎಂದು ಜ್ಯೋತಿಮಣಿ ಹೇಳಿದ್ದಾರೆ.
ವೈದ್ಯಪದ್ಧತಿಯಲ್ಲೇ ವೈವಿಧ್ಯಮಯವಾಗಿರುವ ಆಯುಷ್ ಇಲಾಖೆ, ಸಚಿವಾಲಯಗಳಲ್ಲಿ ಒಂದೇ ಭಾಷೆಯನ್ನು ಹೇರುವುದಕ್ಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದು, ಶೀಘ್ರವೇ ಕಾರ್ಯದರ್ಶಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
Advertisement