ರಾಂಚಿ: ತಂಬಾಕು ತ್ಯಜಿಸಿದರೇ ಸರ್ಕಾರಿ ಉದ್ಯೋಗ ನೀಡುವುದಾಗಿ ಜಾರ್ಖಂಡ್ ಸರ್ಕಾರ ಘೋಷಿಸಿದೆ. ತಂಬಾಕು ಜಗಿಯುವುದನ್ನು ನಿಲ್ಲಿಸಿರುವ ಸಂಬಂಧ ಪ್ರಮಾಣ ಪತ್ರ ನೀಡುವುದು ಕಡ್ಡಾಯವಾಗಿದೆ.
ತಂಬಾಕು ಜಗಿಯುವ ಮತ್ತು ಧೂಮಪಾನ ಮಾಡುವ ಹವ್ಯಾಸವನ್ನು ತಪ್ಪಿಸಲು ಸರ್ಕಾರ ಈ ನಿಯಮ ಜಾರಿಗೆ ತಂದಿದ್ದು, ಏಪ್ರಿಲ್ 1, 2021 ರಿಂದ ಅನುಷ್ಠಾನಗೊಳ್ಳಲಿದೆ.
ಮಂಗಳವಾರ ಮುಖ್ಯ ಕಾರ್ಯದರ್ಶಿ ಸುಖದೇವ್ ಸಿಂಗ್ ನೇತೃತ್ವದಲ್ಲಿ ನಡೆದ ತಂಬಾಕು ನಿಯಂತ್ರಣ ಸಮನ್ವಯ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಚಹಾ ಮತ್ತು ಬಿಸ್ಕಟ್ಗಳಂತಹ ಇತರ ಖಾದ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ತಂಬಾಕು ಮಾರಾಟ ಸಾಧ್ಯವಿಲ್ಲ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ತಂಬಾಕು ನಿಯಂತ್ರಣ ಕಾಯ್ದೆ ಈಗಾಗಲೇ ಜಾರ್ಖಂಡ್ನಲ್ಲಿ ಜಾರಿಯಲ್ಲಿದ್ದರೂ 150 ವ್ಯಾಪಾರಿಗಳು ಮಾತ್ರ ಪರವಾನಗಿ ಪಡೆದಿದ್ದಾರೆ. ಚಹಾ ಅಂಗಡಿಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ ಎಂದು ಸಭೆಯಲ್ಲಿ ತಿಳಿಸಿದೆ.
ರಾಂಚಿ, ಧನ್ಬಾದ್, ಬೊಕಾರೊ, ಖುಂಟಿ, ಸರೈಕೆಲಾ-ಖರ್ಸವಾನ್ ಮತ್ತು ಹಜಾರಿಬಾಗ್ ಅನ್ನು ತಂಬಾಕು ಮುಕ್ತ ಜಿಲ್ಲೆಗಳೆಂದು ಘೋಷಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸರ್ಕಾರಿ ಉದ್ಯೋದಲ್ಲಿರುವವರು, ತಂಬಾಕು ಸೇವಿಸುತ್ತಿಲ್ಲ ಎಂಬ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಲು ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿಲಾಗಿದೆ, ನಿಷೇಧಿತ ಗುಟ್ಕಾವನ್ನು ರಾಜ್ಯ ಪ್ರವೇಶಿಸುವ ಮೊದಲೇ ತಡೆಯಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಯಿತು.
ಇನ್ನೂ ಶಾಲೆಯಿಂದ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವಂತೆ, ಹಾಗೂ ನಿಯಮ ಉಲ್ಲಂಘನೆ ಮಾಡಿದ ಅಂಗಡಿಗಳ ವಿರುದ್ಧಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಸೂಚಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಜಗಿದು ಉಗುಳುವುದನ್ನು ನಿಷೇಧಿಸುವಂತೆ ಕೂಡ ಸೂಚಿಸಲಾಗಿದೆ.
Advertisement