ಹೊಸ ಸಂಸತ್ ಭವನವನ್ನು ಚೀನಾದ ಮಹಾ ಗೋಡೆ ನಿರ್ಮಾಣಕ್ಕೆ ಹೋಲಿಸಿದ ಕಮಲ್ ಹಾಸನ್; ಏಕೆ ಗೊತ್ತೇ?
ಕೊರೋನಾ ವೈರಸ್ ನಿಂದ ಉದ್ಯೋಗ ನಷ್ಟ ಉಂಟಾಗಿ ಅರ್ಧ ಭಾರತವೇ ಹಸಿವಿನಲ್ಲಿದೆ ಇಂತಹ ಸಮಯದಲ್ಲಿ 1,000 ಕೋಟಿ ರೂಪಾಯಿ ವ್ಯಯಿಸಿ ಹೊಸ ಸಂಸತ್ ಭವನ ನಿರ್ಮಿಸುವ ಅಗತ್ಯವೇನಿದೆ? ಎಂದು ಮಕ್ಕಳ್ ನೀಧಿ ಮಯ್ಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ಹೊಸ ಸಂಸತ್ ಭವನದ ನಿರ್ಮಾಣವನ್ನು ಗ್ರೇಟ್ ವಾಲ್ ಆಫ್ ಚೀನಾದ ಗೆ ಹೋಲಿಕೆ ಮಾಡಿರುವ ಕಮಲ್ ಹಾಸನ್, ಅದನ್ನು ನಿರ್ಮಿಸಬೇಕಾದರೆ ಸಾವಿರಾರು ಜನರನ್ನು ನಾಶ ಮಾಡಲಾಗಿತ್ತು. ಆದರೆ ಚೀನಾದ ಅಂದಿನ ನಾಯಕರು ಜನರ ರಕ್ಷಣೆಗಾಗಿ ಇದನ್ನು ನಿರ್ಮಿಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದರು. ಈಗ ಭಾರತದಲ್ಲಿ ಅರ್ಧ ದೇಶವೇ ಹಸಿವಿನಿಂದ ಬಳಲುತ್ತಿರಬೇಕಾದರೆ 1,000 ಕೋಟಿ ರೂಪಾಯಿ ವೆಚ್ಚದಲ್ಲಿ ಯಾರ ರಕ್ಷಣೆಗಾಗಿ ನೂತನ ಸಂಸತ್ ಭವನ ನಿರ್ಮಾಣ ಮಾಡಲಾಗಿದೆ ಎಂದು ಕಮಲ್ ಹಾಸನ್ ಟ್ವೀಟ್ ಮೂಲಕ ಕೇಳಿದ್ದಾರೆ.
ದಕ್ಷಿಣ ತಮಿಳುನಾಡಿನ ಮಧುರೈ ನಲ್ಲಿ ಪ್ರಚಾರ ಕೈಗೊಳ್ಳುವುದಕ್ಕೂ ಕೆಲವೇ ಗಂಟೆಗಳ ಮುನ್ನ ಟ್ವೀಟ್ ಮಾಡಿರುವ ಕಮಲ್ ಹಾಸನ್, "ಉತ್ತರಿಸಿ ಮಾನ್ಯ ಪ್ರಧಾನಿಗಳೇ" ಎಂದು ಟ್ವೀಟ್ ನಲ್ಲಿ ಕೇಳಿದ್ದಾರೆ. ತಮಿಳುನಾಡಿನ ವಿಧಾನಸಭಾ ಚುನಾವಣೆ 2021 ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಡಿ.10 ರಂದು ಹೊಸ ಸಂಸತ್ ಭವನ ನಿರ್ಮಾಣಕ್ಕಾಗಿ ಶಂಕುಸ್ಥಾಪನೆ ನೆರವೇರಿಸಿದ್ದರು. ಹೊಸ ಸಂಸತ್ ಭವನ 2022 ರ ವೇಳೆಗೆ ಮುಕ್ತಾಯಗೊಳ್ಳಲಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ