ಚೆನ್ನೈ: ನಟ-ರಾಜಕಾರಣಿ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮೈಯ್ಯುಮ್ (ಎಂಎನ್ಎಂ) ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಎ ಅರುಣಾಚಲಂ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ತಮಿಳುನಾಡು ವಿಧಾನಸಭೆ ಚುನಾವಣೆಗೆ ಮುನ್ನವೇ ಕಮಲ್ ಹಾಸನ್ ಗೆ ಭಾರೀ ಶಾಕ್ ನೀಡಿದ್ದಾರೆ.
ಕೇಂದ್ರದ ಮೂರು ನೂತನ ಕೃಷ ಕಾನೂನುಗಳನ್ನು ಬೆಂಬಲಿಸಿ ಅರುಣಾಚಲಂ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಅರುಣಾಚಲಂ ಅವರು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಎಲ್ ಮುರುಗನ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು.
ಕೇಂದ್ರದ ಕೃಷಿ ಕಾನೂನನ್ನುಬೆಂಬಲಿಸಲು ಕಮಲ್ ನಿರಾಕರಿಸಿದ ನಂತರ ತಾವು ಬಿಜೆಪಿಗೆ ಸೇರಿಕೊಂಡಿದ್ದಾಗಿ ಅರುಣಾಚಲಂ ಸುದ್ದಿಗಾರರಿಗೆ ಹೇಳಿದ್ದಾರೆ. "ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ರೈತರಿಗೆ ಅನುಕೂಲವಾಗುವಂತಹ ದೀರ್ಘಾವಧಿ ದೃಷ್ಟಿಯಿಂದ ಈ ಮೂರು ಕಾನೂನುಗಳನ್ನು ರೂಪಿಸಿದ್ದಾರೆ, ನಾನು ಸಹ ರೈತ ಕುಟುಂಬದಿಂದ ಬಂದಿದ್ದರಿಂದ, ಅವುಗಳ ಪ್ರಯೋಜನಗಳನ್ನು ನಾನು ತಿಳಿದಿದ್ದೇನೆ' ಎಂದು ಹೇಳಿದರು.
"ಕೇಂದ್ರದ ನಿರ್ಧಾರವನ್ನು ಬೆಂಬಲಿಸುವಂತೆ ನನ್ನ ನಾಯಕ (ಕಮಲ್) ಮತ್ತು ಎಂಎನ್ಎಂ ನಾಯಕರನ್ನು ನಾನು ಕೇಳಿದಾಗ ಅವರು ನಿರಾಕರಿಸಿದರು. ನಾನಿದನ್ನು ಬಿಜೆಪಿಯ ಕಾನೂನು ಎಂದು ಪರಿಗಣಿಸಬೇಡಿ ಎಂದು ಹೇಳಿದೆ. ಕೇಂದ್ರ ಸರ್ಕಾರವು ದೀರ್ಘಾವಧಿಯಲ್ಲಿ ರೈತರ ಅನುಕೂಲಕ್ಕಾಗಿ ಈ ಕಾನೂನು ತಂದಿದ್ದಾಗಿ ನಾನು ಹೇಳಿದೆ. ನಾನು ಮನವರಿಕೆ ಮಾಡಲು ಪ್ರಯತ್ನಿಸಿದರೂ ಯಶಸ್ವಿಯಾಗಿಲ್ಲ. ನನಗೆ ಬೇರೆ ಮಾರ್ಗವಿಲ್ಲದ ಕಾರಣ ಪಕ್ಷವನ್ನು ತೊರೆದಿದ್ದೇನೆ" ಅವರು ಹೇಳಿದ್ದಾರೆ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಬಿಜೆಪಿಗೆ ಸೇರುತ್ತಿರುವುದು ಸಂತಸ ತಂದಿದೆ ಎಂದು ಅರುಣಾಚಲಂ ನುಡಿದರು.
Advertisement