ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ಕಳೆದ ಆರು ತಿಂಗಳಲ್ಲಿ ಭಯೋತ್ಪಾದಕರ ಚಟುವಟಿಕೆಗಳು ಗಮನಾರ್ಹ ಕಡಿಮೆಯಾಗಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜ.ಮನೋಜ್ ಮುಕುಂದ್ ನರವಾಣೆ ಹೇಳಿದ್ದಾರೆ.
ಅವರು ಇಂದು ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ಕಳೆದ ಆರು ತಿಂಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಾದ ಗ್ರೆನೇಡ್ ದಾಳಿ, ಸುಧಾರಿತ ಸ್ಫೋಟಕ ಸಾಧನ(ಐಇಡಿ) ದಾಳಿ, ಗುಂಡಿನ ದಾಳಿಯಂತಹ ದಾಳಿಗಳು ತೀವ್ರ ಮಟ್ಟದಲ್ಲಿ ಕಡಿಮೆಯಾಗಿದೆ ಎಂದರು.
ಸಾರಂಗ್ ಫಿರಂಗಿ ಗನ್ ಸೇರ್ಪಡೆ: ಭಾರತೀಯ ಯೋಧರಿಗೆ ಯುದ್ಧ ಸಾಮಗ್ರಿಗಳನ್ನು ಪೂರೈಸುವ ನಿಟ್ಟಿನಲ್ಲಿ ಹೆಚ್ಚೆಚ್ಚು ಶಸ್ತ್ರಾಸ್ತ್ರಗಳನ್ನು ಖರೀದಿಸಿ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಯುದ್ಧ ಮಾಡುವ ಯೋಧರಿಗೆ ನೀಡಲಾಗುವುದು.ಭಾರತೀಯ ಸೇನೆಗೆ ನಾಳೆ ಸಾರಂಗ್ ಫಿರಂಗಿ ಗನ್ ಗಳನ್ನು ಸೇರ್ಪಡೆ ಮಾಡಲಾಗುವುದು. 155 ಮಿಲಿ ಮೀಟರ್ ಉದ್ದದ ಸಾರಂಗ್ 130 ಮಿಲಿ ಮೀಟರ್ ಉದ್ದದ ಎಂ-46 ಯುದ್ಧಭೂಮಿಯ ಗನ್ ನ ಸುಧಾರಿತ ರೂಪವಾಗಿದೆ ಎಂದರು.
ಭಾರತ ಮತ್ತು ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಬಳಿ ಯುದ್ಧ ವಿರಾಮ ಉಲ್ಲಂಘನೆ ಹೆಚ್ಚಾಗಿದೆ. ಪಾಕಿಸ್ತಾನ ಉಗ್ರರನ್ನು ಅದರ ಲಾಂಚ್ ಪ್ಯಾಡ್ ಮತ್ತು ಹಲವು ಶಿಬಿರಗಳಿಂದ ಭಾರತದತ್ತ ತಳ್ಳುತ್ತಿದೆ. ಆದರೆ ಚಳಿಗಾಲವಾದ್ದರಿಂದ ಅಲ್ಲಿಂದ ಉಗ್ರರು ಭಾರತದೊಳಗೆ ನುಸುಳಲು ಕಷ್ಟವಾಗುತ್ತಿದೆ. ಭಾರತೀಯ ಯೋಧರು ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾರೆ, ಪಾಕಿಸ್ತಾನ ಭಾರತದೊಳಗೆ ಉಗ್ರರನ್ನು ಕಳುಹಿಸುವ ಬಹುತೇಕ ಪ್ರಯತ್ನಗಳಲ್ಲಿ ವಿಫಲವಾಗಿದೆ ಎಂದರು.
Advertisement