ನವದೆಹಲಿ: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಮುರಳೀಧರ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ಗೆ ವರ್ಗಾಯಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2014 ರಲ್ಲಿ ನಿಧನರಾದ ನ್ಯಾಯಾಧೀಶ ಲೋಯಾರನ್ನು ನೆನಪಿಸಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ದೆಹಲಿ ಬಿಜೆಪಿ ನಾಯಕ "ತಾವು ಅಳಿದ 10,000 ಸಿಖ್ಖರನ್ನು ನೆನಪಿಸಿಕೊಳ್ಳುವುದಾಗಿ" ಎದುರೇಟು ಕೊಟ್ಟಿದ್ದಾರೆ.
ರಾಹುಲ್ ಗಾಂಧಿ "ವರ್ಗಾವಣೆಯಾಗದ ಧೈರ್ಯಶಾಲಿ ನ್ಯಾಯಾಧೀಶ ಲೋಯಾರನ್ನು ನಾನಿಂದು ನೆನೆಯುತ್ತೇವೆ" ಎಂದು ಟ್ವೀಟ್ ಮಾಡಿದ್ದಾರೆ.
ನ್ಯಾಯಮೂರ್ತಿ ಲೋಯಾ 2014 ರಲ್ಲಿ ನಾಗ್ಪುರದಲ್ಲಿ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದರು. ಅವರು ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣವನ್ನು ವಿವಾರಣೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ರು, ಇದರಲ್ಲಿ ಬಿಜೆಪಿ ನಾಯಕ ಅಮಿತ್ ಶಾ ಅವರನ್ನು ಆರೋಪಿ ಎಂದು ಹೆಸರಿಸಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಸೊಹ್ರಾಬುದ್ದೀನ್ ಪ್ರಕರಣದಲ್ಲಿ ಷಾಗೆ ಕ್ಲೀನ್ ಚಿಟ್ ನೀಡಿತ್ತು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಕೇಂದ್ರವು ನ್ಯಾಯಾಂಗದಲ್ಲಿ ಮೂಗು ತೂರಿಸಲು ಪ್ರಯತ್ನಿಸುತ್ತಿರುವುದು ವಿಷಾದಕರ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಟ್ವೀಟ್ ಮಾಡಿದ್ದಾರೆ."ನ್ಯಾಯಮೂರ್ತಿ ಮುರಳೀಧರ್ ಅವರ ಮಧ್ಯರಾತ್ರಿ ವರ್ಗಾವಣೆ ನೋಡಿದರೆ ಖಂಡಿತವಾಗಿಯೂ ದುಃಖಕರ ಮತ್ತು ನಾಚಿಕೆಗೇಡಿನ ಸಂಗತಿ" ಎಂದಿದ್ದಾರೆ.
"ಲಕ್ಷಾಂತರ ಭಾರತೀಯರು ನ್ಯಾಯಾಂಗದ ಮೇಲೆ ನಂಬಿಕೆಯನ್ನು ಹೊಂದಿದ್ದಾರೆ,ನ್ಯಾಯಾಂಗದಲ್ಲಿ ಮೂಗು ತೂರಿಸುವ ವರ ನಂಬಿಕೆಯನ್ನು ಮುರಿಯುವ ಸರ್ಕಾರದ ಪ್ರಯತ್ನಗಳು ಶೋಚನೀಯ" ಎಂದು ಅವರು ಹೇಳಿದರು.
ಇನ್ನು ರಾಹುಲ್ ಹೇಳಿಕೆಗೆ ಪ್ರತಿಯಾಗಿ ಎದುರೇಟು ನೀಡಿರುವ ಬಿಜೆಪಿ ದೆಹಲಿ ನಾಯಕ ತಾಜಿಂದರ್ ಬಗ್ಗಾ "ಅಳಿದ 10,000 ಸಿಖ್ಖರನ್ನು ನೆನಪಿಸಿಕೊಳ್ಳುತ್ತೇನೆ" ಎಂದಿದ್ದಾರೆ.
ವರ್ಗಾವಣೆಯ ಬಗ್ಗೆ ಸರ್ಕಾರದ ಅಧಿಸೂಚನೆಯನ್ನು ಬುಧವಾರ ಹೊರಡಿಸಲಾಗಿದ್ದು, ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅವರೊಂದಿಗೆ ಸಮಾಲೋಚಿಸಿದ ನಂತರ ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರು ದೆಹಲಿ ಹೈಕೋರ್ಟ್ನ ನ್ಯಾಯಾಧೀಶರಾದ ಎಸ್ ಎಸ್ ಮುರಳೀಧರ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ನ್ಯಾಯಾಧೀಶರನ್ನಾಗಿ ವರ್ಗಾಯಿಸಿದ್ದಾರೆ.ಮುರಳೀಧರ್ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ತಮ್ಮ ಕಚೇರಿಯ ಉಸ್ತುವಾರಿ ವಹಿಸಿಕೊಳ್ಳಲು ನಿರ್ದೇಶನ ನೀಡಿದ್ದಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಫೆಬ್ರವರಿ 12 ರಂದು ನಡೆದ ಸುಪ್ರೀಂ ಕೋರ್ಟ್ ಕೊಲಿಜಿಯಂ ತನ್ನ ಸಭೆಯಲ್ಲಿ ನ್ಯಾಯಮೂರ್ತಿ ಮುರಳೀಧರ್ ಅವರನ್ನು ದೆಹಲಿ ಹೈಕೋರ್ಟ್ನಿಂದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ಗೆ ವರ್ಗಾಯಿಸಲು ಶಿಫಾರಸು ಮಾಡಿತ್ತು.
Advertisement