ನವದೆಹಲಿ: ಪಾಕಿಸ್ತಾನದ ನಂಕಾನಾ ಸಾಹಿಬ್ ಗುರುದ್ವಾರದ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಇದು "ಅನಗತ್ಯ ಮತ್ತು ಅಪ್ರಚೋದಿತ" ದಾಳಿ ಎಂದು ಹೇಳಿದ್ದಾರೆ.
ಸಿಖ್ ಯಾತ್ರಾರ್ಥಿಗಳ ಸುರಕ್ಷತೆಯ ಬಗ್ಗೆ ಬೇಸರ ಮತ್ತು ಕಳವಳ ವ್ಯಕ್ತಪಡಿಸಿರುವ ಸೋನಿಯಾ ಗಾಂಧಿ, “ಯಾತ್ರಾರ್ಥಿಗಳಿಗೆ ಭದ್ರತೆ ಮತ್ತು ಭವಿಷ್ಯದಲ್ಲಿ ನಡೆಯಬಹುದಾದ ಯಾವುದೇ ದಾಳಿಯನ್ನು ತಡೆಗಟ್ಟಲು ಪಾಕಿಸ್ತಾನ ಸರ್ಕಾರ ದೇವಾಲಯಕ್ಕೆ ಬಿಗಿ ಭದ್ರತೆಯನ್ನು ನೀಡಬೇಕು. ಪಾಕಿಸ್ತಾನದ ಅಧಿಕಾರಿಗಳ ಜೊತೆಗೆ ಕೇಂದ್ರ ಸರ್ಕಾರ ಈ ಕೂಡಲೇ ಸಂಪರ್ಕ ಸಾಧಿಸಿ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
ದಾಳಿಕೋರರ ವಿರುದ್ಧ ಕೂಡಲೇ ಕೇಸ್ ದಾಖಲಿಸಿ, ಅವರನ್ನು ಬಂಧಿಸಬೇಕು ಎಂದು ಭಾರತ ಸರ್ಕಾರ ಇಮ್ರಾನ್ ಖಾನ್ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದ ಸೋನಿಯಾ ಗಾಂಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ದೇವ್ ಜನ್ಮಸ್ಥಳ ಎಂದೇ ಖ್ಯಾತಿ ಹೊಂದಿರುವ ನಂಕಾನ ಸಾಹಿಬ್ ಗುರುದ್ವಾರದ ಮೇಲೆ ಶುಕ್ರವಾರ ದಾಳಿ ನಡೆದಿದೆ. ನೂರಕ್ಕು ಹೆಚ್ಚು ಜನರ ಕಿಡಿಗೇಡಿಗಳ ಗುಂಪೊಂದು ಸಿಖ್ಖರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದರಿಂದ ದಾಳಿ ನಡೆದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
Advertisement