ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯ ಪ್ರತಿಷ್ಠಿತ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕಳೆದ ರಾತ್ರಿ ನಡೆದ ದಾಂಧಲೆ ವೇಳೆಯಲ್ಲಿ ಮುಸುಕುಧಾರಿ ಪುಂಡರು, ಸಬರಮತಿ ಹಾಸ್ಟೆಲ್ ನಲ್ಲಿನ ವಿದ್ಯಾರ್ಥಿಗಳನ್ನು ನೀವು ಎಡಪಂಥಿಯರೇ ಎಂದು ಕೇಳಿದ್ದಾರೆ.
ಭಾನುವಾರ ಸಂಜೆ 6-30ರ ಸುಮಾರಿನಲ್ಲಿ ಕೈಯಲ್ಲಿ ದೊಣ್ಣೆ, ಕಬ್ಬಿಣದ ರಾಡು, ಕೆಲ ರಾಸಾಯನಿಕ ವಸ್ತುವಿದ್ದ ಗಾಜಿನ ಬಾಟಲಿ ಹಿಡಿದು ಹಾಸ್ಟೆಲ್ ನೊಳಗೆ ನುಗ್ಗಿದ 20 ಮುಸುಕುಧಾರಿ ದಾಳಿಕೋರರು, ನನ್ನನ್ನು ಎಡಪಂಥೀಯರೇ ಎಂದು ಪ್ರಶ್ನಿಸಿದರು, ನಾನು ಎಡಪಂಥೀಯನಾಗಿದ್ದರೂ ಇಲ್ಲ ಎಂದು ಹೇಳಿದ್ದಾಗಿ ಸಬರಮತಿ ಪುರುಷರ ಹಾಸ್ಟೆಲ್ ನ ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ.
ಈ ಪುಂಡರು ಹಾಸ್ಟೆಲ್ ಗೆ ನುಗ್ಗಿ ದಾಂಧಲೆ ನಡೆಸುವವರೆಗೂ ಯಾವುದೇ ಪೊಲೀಸರಾಗಲೀ ಅಥವಾ ಭದ್ರತಾ ಸಿಬ್ಬಂದಿ ಕೂಡಾ ಹಾಸ್ಟೆಲ್ ಒಳಗಡೆ ಬರಲೇ ಇಲ್ಲ ಎಂದು ಅವರು ದಿ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ್ದಾರೆ.
ಈ ಮಧ್ಯೆ ಕಳೆದ ರಾತ್ರಿ ನಡೆದ ಘಟನೆ ತನಿಖೆಗೆ ಸಂಬಂಧಿಸಿದಂತೆ ಜೆಎನ್ ಯು ಕ್ಯಾಂಪಸ್ ನಲ್ಲಿದ್ದ ಸಿಸಿಟಿವಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಈ ಹಿಂಸಾಚಾರದ ಕುರಿತು ಚರ್ಚಿಸುವ ಸಲುವಾಗಿ ವಿಶ್ವವಿದ್ಯಾಲಯದ ರಿಜಿಸ್ಟ್ರರ್, ಪ್ರೊಕ್ಟರ್, ರೆಕ್ಟರ್ ಅವರನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಗಳು ಇಂದು ಕರೆದಿದ್ದಾರೆ.
Advertisement