ಥಾಣೆ: 56 ಶಿವಸೇನಾ ಶಾಸಕರ ಪೈಕಿ 35 ಶಾಸಕರಲ್ಲಿ ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನವಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ ಹೇಳಿದ್ದಾರೆ.
ಶಿವಸೇನಾ, ಎನ್ ಸಿಪಿ ಹಾಗೂ ಕಾಂಗ್ರೆಸ್ ರಾಜ್ಯದಲ್ಲಿ ಸರ್ಕಾರ ರಚನೆಗೆ ಐದು ವಾರಗಳಿಗೂ ಹೆಚ್ಚು ದಿನ ತೆಗೆದುಕೊಂಡರೂ ಉದ್ದವ್ ಠಾಕ್ರೆ ನೇತೃತ್ವದ ಸರ್ಕಾರ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹಾಲಿ ರಾಜ್ಯಸಭಾ ಸದಸ್ಯ ಆಗಿರುವ ನಾರಾಯಣ್ ರಾಣೆ ಟೀಕಿಸಿದ್ದಾರೆ.
ಬಿಜೆಪಿ 105 ಶಾಸಕರನ್ನು ಹೊಂದಿದೆ. ಶಿವಸೇನೆ ಕೇವಲ 56 ಶಾಸಕರನ್ನು ಹೊಂದಿದೆ. ಅದರಲ್ಲಿಯೂ 35 ಮಂದಿಯಲ್ಲಿ ಅಸಮಾಧಾನವಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ರೈತರ ಸಾಲಮನ್ನಾ ಘೋಷಣೆ ಕೇವಲ ಸುಳ್ಳು. ಅದು ಯಾವಾಗ ಅನುಷ್ಠಾನವಾಗಲಿದೆ ಎಂಬುದರ ಬಗ್ಗೆ ಯಾವುದೇ ಸಮಯ ನಿಗದಿಪಡಿಸಿಲ್ಲ, ಇಂತಹ ಸರ್ಕಾರದಿಂದ ಏನನ್ನು ನಿರೀಕ್ಷಿಸಲು ಸಾಧ್ಯ, ಸರ್ಕಾರದ ಬಗ್ಗೆ ಅವರಿಗೆ ಏನು ಗೊತ್ತೇ ಇಲ್ಲ ಎಂದರು.
ಸರ್ಕಾರ ರಚನೆಗೆ ಐದು ವಾರಗಳಿಗೂ ಅಧಿಕ ದಿನ ತೆಗೆದುಕೊಂಡಾಗಲೇ ಹೇಗೆ ಆಡಳಿತ ನಿರ್ವಹಣೆ ಮಾಡಲಿದ್ದಾರೆ ಎಂಬುದನ್ನು ಪ್ರತಿಯೊಬ್ಬರು ಊಹಿಸಿದ್ದಾರೆ ಎಂದು ಅವರು ಹೇಳಿದರು.
Advertisement