ಭೀಮಾ-ಕೋರೆಗಾಂವ್ ಪ್ರಕರಣ ಎನ್ಐಎಗೆ ವರ್ಗಾವಣೆ: ಮೋದಿ, ಶಾ ವಿರುದ್ಧ ರಾಹುಲ್ ವಾಗ್ದಾಳಿ
ನವದೆಹಲಿ: ಭೀಮಾ-ಕೊರೆಗಾಂವ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ(ಎನ್ಐಎ) ವರ್ಗಾಯಿಸಿದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಶನಿವಾರ ಭೀಮಾ-ಕೋರೆಗಾಂವ್ ಪ್ರತಿರೋಧದ ಸಂಕೇತವಾಗಿದೆ ಮತ್ತು ಸರ್ಕಾರದ ಪಾತ್ರವನ್ನು ಎಂದಿಗೂ ಅಳಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇಬ್ಬರ ಹೆಸರನ್ನು ಜೋಡಿಸಿ 'ಮೋಶ್' ಎಂದು ಉಲ್ಲೇಖಿಸಿದ ಗಾಂಧಿ, ಇವರಿಬ್ಬರ 'ದ್ವೇಷದ ಕಾರ್ಯಸೂಚಿಯನ್ನು' ವಿರೋಧಿಸುವ ಪ್ರತಿಯೊಬ್ಬರನ್ನೂ 'ಅರ್ಬನ್ ನಕ್ಸಲ್' ಎಂದು ಕರೆಯಲಾಗುತ್ತದೆ ಎಂದು ಕಿಡಿ ಕಾರಿದ್ದಾರೆ.
“ದ್ವೇಷದ ಕಾರ್ಯಸೂಚಿಯನ್ನು ವಿರೋಧಿಸುವ ಯಾರಾದರೂ 'ಅರ್ಬನ್ ನಕ್ಸಲ್' ಎಂದು ಕರೆಯಲಾಗುತ್ತದೆ. ಭೀಮಾ-ಕೋರೆಗಾಂವ್ ಪ್ರತಿರೋಧದ ಸಂಕೇತವಾಗಿದ್ದು, ಸರ್ಕಾರದ ಪಾತ್ರವನ್ನು ಎಂದಿಗೂ ಅಳಿಸಲಾಗುವುದಿಲ್ಲ" ಎಂದ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಪ್ರಕರಣವನ್ನು ಎನ್ಐಗ ವರ್ಗಾಯಿಸಿರುವ ಕೇಂದ್ರ ಸರ್ಕಾರದ ಕ್ರಮ ಮಹಾರಾಷ್ಟ್ರದ ಮೈತ್ರಿ ಸರ್ಕಾರವನ್ನು ಕೆರಳಿಸಿರುವ ಬೆನ್ನಲ್ಲೇ ರಾಹುಲ್ ಗಾಂಧಿಯವರು ಈ ಪ್ರತಿಕ್ರಿಯ ನೀಡಿದ್ದಾರೆ.
ಮಹಾರಾಷ್ಟ್ರ ಸರ್ಕಾರವು ಪುಣೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ಇಡೀ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು(ಎಸ್ಐಟಿ) ರಚಿಸುವ ತೀರ್ಮಾನ ಕೈಗೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಿದೆ.
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ಕೇಂದ್ರದ ಈ ಕ್ರಮವನ್ನು ಟೀಕಿಸಿದ್ದು, "ಭೀಮಾ ಕೋರೆಗಾಂವ್ ಪ್ರಕರಣದ ತನಿಖೆಯನ್ನು ಎನ್ಐಎಗೆ ಹಸ್ತಾಂತರಿಸುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ರಾಜ್ಯ ಸರ್ಕಾರದ ಒಪ್ಪಿಗೆಯಿಲ್ಲದೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ