ನವದೆಹಲಿ:ರಾಜಸ್ತಾನ ರಾಜಕೀಯದಲ್ಲಿ ಮುಂದುವರಿದಿರುವ ರಾಜಕೀಯ ಅನಿಶ್ಚಿತತೆ ಮಧ್ಯೆ, ರಾಜಕೀಯ ನಾಯಕರ ಅದರಲ್ಲೂ ವಿರೋಧ ಪಕ್ಷ ಬಿಜೆಪಿ ನಾಯಕರ ಫೋನ್ ಸಂಭಾಷಣೆಗಳನ್ನು ಕದ್ದಾಲಿಸಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ರಾಜಸ್ತಾನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಬಳಿ ವರದಿ ಕೇಳಿದೆ.
ಅಲ್ಲದೆ ರಾಜಸ್ತಾನ ಸರ್ಕಾರವನ್ನು ಉರುಳಿಸಲು ಬಂಡಾಯ ಶಾಸಕರು ಸೇರಿದಂತೆ ಬಿಜೆಪಿ ನಾಯಕರು ಪಿತೂರಿ ನಡೆಸಿದ್ದಾರೆ, ಇದಕ್ಕೆ ಪುಷ್ಠಿ ನೀಡುವ ಸಂಭಾಷಣೆಗಳುಳ್ಳ ಆಡಿಯೊ ಕ್ಲಿಪ್ ಗಳನ್ನು ಬಹಿರಂಗಪಡಿಸಿ ಕಾಂಗ್ರೆಸ್ ದಾಖಲಿಸಿರುವ ಎರಡು ಎಫ್ಐಆರ್ ಬಳಿಕ ಅದರ ಬಗ್ಗೆ ಕೂಡ ಗೃಹ ಸಚಿವಾಲಯ ವರದಿ ಕೇಳಿದೆ.
ಈ ಮಧ್ಯೆ ನಿನ್ನೆ ಕಾಂಗ್ರೆಸ್ ಸರ್ಕಾರ ರಾಜಕೀಯ ನಾಯಕರ ಫೋನ್ ನ್ನು ಕದ್ದಾಲಿಸುತ್ತಿದೆ ಎಂದು ಆರೋಪಿಸಿದ ರಾಜಸ್ತಾನ ಬಿಜೆಪಿ, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ. ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ಪೊಲೀಸರು ಆಡಿಯೊ ಕ್ಲಿಪ್ ಗಳ ನೈಜತೆ, ಸತ್ಯಾಸತ್ಯತೆ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದರೂ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಸೇರಿದಂತೆ ಕಾಂಗ್ರೆಸ್ ನ ಹಿರಿಯ ನಾಯಕರು ಅದು ನಿಖರವಾದದ್ದು ಎನ್ನುತ್ತಿದ್ದಾರೆ. ಇದರ ಬಗ್ಗೆ ಸಹ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ.
Advertisement