ನವದೆಹಲಿ:ಸಚಿನ್ ಪೈಲಟ್ ಮತ್ತು ಇತರ 18 ಮಂದಿ ಶಾಸಕರ ಅನರ್ಹತೆ ಪ್ರಕರಣವನ್ನು ವಿಳಂಬ ಮಾಡುತ್ತಿರುವ ಹೈಕೋರ್ಟ್ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ರಾಜಸ್ತಾನ ವಿಧಾನಸಭೆ ಸ್ಪೀಕರ್ ಸಿ ಪಿ ಜೋಶಿ ಅವರ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ ನಡೆಸಲಿದೆ.
ಲಕ್ಷ್ಮಣರೇಖೆ ದಾಟದೆ ಸಂವಿಧಾನದೊಳಗೆ ಪ್ರಜಾಪ್ರಭುತ್ವದ ನಿಯಮಗಳನ್ನು ಪಾಲಿಸಿಕೊಂಡು ಹೋಗಬೇಕಾಗಿರುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ, ರಾಜಸ್ತಾನ ಸರ್ಕಾರದಲ್ಲಿ ಬಂಡಾಯ ಶಾಸಕರು ತಮ್ಮ ಸಾಂವಿಧಾನಿಕ ನಿಯಮ ಮೀರಿ ಹೋಗಿದ್ದಾರೆ ಎಂದು ಅನಿಸುತ್ತಿದೆ ಎಂದು ಸ್ಪೀಕರ್ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಬಂಡಾಯವೆದ್ದಿದ್ದ ಸಚಿನ್ ಪೈಲಟ್ ಮತ್ತು ಇತರ 18 ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸಚಿನ್ ಪೈಲಟ್ ಹೈಕೋರ್ಟ್ ಮೊರೆ ಹೋಗಿದ್ದರು. ಅದರ ಅರ್ಜಿ ವಿಚಾರಣೆ ನಾಳೆ ರಾಜಸ್ತಾನ ಹೈಕೋರ್ಟ್ ನಲ್ಲಿ ನಡೆಯಲಿದೆ.
ಹೈಕೋರ್ಟ್ ನ ವಿಳಂಬತೆಯನ್ನು ಪ್ರಶ್ನಿಸಿರುವ ಸ್ಪೀಕರ್ ಅವರ ಅರ್ಜಿ ವಿಚಾರಣೆ ತೀರ್ಪು ಮತ್ತು ನಾಳೆ ಹೈಕೋರ್ಟ್ ನೀಡಲಿರುವ ತೀರ್ಪಿನ ಮೇಲೆ ರಾಜಸ್ತಾನ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ. ಸ್ಪೀಕರ್ ಅವರು ಸುಪ್ರೀಂ ಕೋರ್ಟ್ ಗೆ ನಿನ್ನೆ ಸಲ್ಲಿಸಿದ್ದ ಅರ್ಜಿಯಲ್ಲಿ ಕಳೆದ ವರ್ಷದ ಕರ್ನಾಟಕ ಮೈತ್ರಿ ಸರ್ಕಾರದಿಂದ ಹೊರಬಂದಿದ್ದ ಬಂಡಾಯ ಶಾಸಕರು ಮತ್ತು ಮಧ್ಯ ಪ್ರದೇಶದ ಉದಾಹರಣೆ ಕೊಟ್ಟು ಈ ಎರಡೂ ರಾಜ್ಯಗಳಲ್ಲಿ ಕುದುರೆ ವ್ಯಾಪಾರ ಮಾಡಿ ಸರ್ಕಾರವನ್ನು ಉರುಳಿಸಲಾಯಿತು ಎಂದು ಉದಾಹರಣೆ ಕೊಟ್ಟಿದ್ದಾರೆ.
Advertisement