ಸಚಿನ್ ಪೈಲಟ್ ಬಣ ಸದ್ಯಕ್ಕೆ ಸೇಫ್: ಯಥಾಸ್ಥಿತಿ ಕಾಯ್ದುಕೊಳ್ಳಲು ರಾಜಸ್ತಾನ ಹೈಕೋರ್ಟ್ ಆದೇಶ

ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ಇತರ 18 ಮಂದಿ ಬಂಡಾಯ ಶಾಸಕರ ವಿರುದ್ಧ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜಸ್ತಾನ ಹೈಕೋರ್ಟ್ ಶುಕ್ರವಾರ ಸ್ಪೀಕರ್ ಗೆ ಆದೇಶ ನೀಡಿದೆ.
ಸಚಿನ್ ಪೈಲಟ್
ಸಚಿನ್ ಪೈಲಟ್

ಜೈಪುರ: ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ಇತರ 18 ಮಂದಿ ಬಂಡಾಯ ಶಾಸಕರ ವಿರುದ್ಧ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜಸ್ತಾನ ಹೈಕೋರ್ಟ್ ಶುಕ್ರವಾರ ಸ್ಪೀಕರ್ ಗೆ ಆದೇಶ ನೀಡಿದೆ.

ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ಇತರ 18 ಮಂದಿ ಬಂಡಾಯ ಶಾಸಕರನ್ನು ಸ್ಪೀಕರ್ ಸಿ ಪಿ ಜೋಶಿ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ನಡೆಸುತ್ತಿರುವ ರಾಜಸ್ತಾನ ಹೈಕೋರ್ಟ್ ಕೊನೆ ಕ್ಷಣದಲ್ಲಿ ಪೈಟಲ್ ಬಣ ಮಾಡಿಕೊಂಡ ಮನವಿ ಮೇರೆಗೆ ಕೇಂದ್ರ ಸರ್ಕಾರವನ್ನು ಪ್ರಕರಣದಲ್ಲಿ ಭಾಗಿದಾರ ಎಂದು ಪರಿಗಣಿಸಲು ಒಪ್ಪಿತು.

ಪಕ್ಷಾಂತರ ನಿಷೇಧ ಕಾಯ್ದೆ ತಮಗೆ ಅನ್ವಯಿಸಲಿದೆಯೇ ಎಂಬ ವಿಚಾರದ ಬಗ್ಗೆ ತೀರ್ಪು ನೀಡುವ ಮೊದಲು ಕೇಂದ್ರ ಸರ್ಕಾರವನ್ನು ಪ್ರಕರಣದಲ್ಲಿ ಭಾಗಿದಾರ ಎಂದು ಪರಿಗಣಿಸಬೇಕೆಂದು ಸಚಿನ್ ಪೈಲಟ್ ಬಣ ಮನವಿ ಮಾಡಿತು. ಇದಕ್ಕೆ ಕೊನೆ ಕ್ಷಣದಲ್ಲಿ ನ್ಯಾಯಾಲಯ ಒಪ್ಪಿಗೆ ನೀಡಿತು. ಹೆಚ್ಚುವರಿ ಸಾಲಿಸಿಟರ್ ಜನರಲ್ ಕೇಂದ್ರದ ಪರವಾಗಿ ಕೋರ್ಟ್ ನಲ್ಲಿ ವಾದ ಮಂಡಿಸಲಿದ್ದಾರೆ ಎಂದು ಸ್ಪೀಕರ್ ಸಿ ಪಿ ಜೋಶಿ ಪರ ವಕೀಲ ಪ್ರತೀಕ್ ಕಸ್ಲಿವಾಲಾ ಇಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪಕ್ಷದ ಸದಸ್ಯತ್ವವನ್ನು ಸ್ವತಃ ತ್ಯಜಿಸಿದರೆ ಸ್ಪೀಕರ್ ಕ್ರಮ ತೆಗೆದುಕೊಳ್ಳಬಹುದು ಎಂಬ ನಿಯಮವನ್ನು ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.ನಮಗೆ ಕಾಂಗ್ರೆಸ್ ಪಕ್ಷವನ್ನು ತ್ಯಜಿಸುವ ಉದ್ದೇಶವಿಲ್ಲ, ನಾಯಕತ್ವದಲ್ಲಿ ಬದಲಾವಣೆ ಬಯಸುತ್ತಿದ್ದೇವೆ ಎಂದು ಸಚಿನ್ ಪೈಲಟ್ ಬಣ ವಾದ ಮಂಡಿಸಿತ್ತು.

ಸ್ಪೀಕರ್ ಸಿ ಪಿ ಜೋಶಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನಿನ್ನೆ ನಡೆಸಿದ್ದ ಸುಪ್ರೀಂ ಕೋರ್ಟ್, ಇಂದು ರಾಜಸ್ತಾನ ಹೈಕೋರ್ಟ್ ಗೆ ವಿಚಾರಣೆ ನಡೆಸಿ ತೀರ್ಪು ನೀಡಲು ಅವಕಾಶ ನೀಡಿತ್ತು. ಸ್ಪೀಕರ್ ಅರ್ಜಿ ವಿಚಾರಣೆಯನ್ನು ಮುಂದಿನ ಸೋಮವಾರದಿಂದ ಹಂತ ಹಂತವಾಗಿ ನಡೆಸಲಿರುವ ಸುಪ್ರೀಂ ಕೋರ್ಟ್ ಅದರ ತೀರ್ಪು ಹೊರ ಬಿದ್ದ ನಂತರವಷ್ಟೇ ಇಂದು ಹೈಕೋರ್ಟ್ ನೀಡುವ ತೀರ್ಪು ಜಾರಿಗೆ ತರಲು ಸಾಧ್ಯ ಎಂದು ಹೇಳಿತ್ತು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಲಿಲ್ಲ ಎಂದು ಪಕ್ಷದ ಮುಖ್ಯ ಸಚೇತಕರ ಅರ್ಜಿ ಮೇರೆಗೆ ಸ್ಪೀಕರ್ ಸಿ ಪಿ ಜೋಶಿ ಸಚಿನ್ ಪೈಲಟ್ ಮತ್ತು ಇತರ 18 ಮಂದಿ ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಕಳೆದ 17ರಂದು ಅನರ್ಹಗೊಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com