ಜಮ್ಮು: ಕಾಶ್ಮೀರದ ಕೇಸರಿಗೆ ಭೌಗೋಳಿಕ ಮಾನ್ಯತೆ ದೊರೆತಿದೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗೌರ್ನರ್ ಜಿಸಿ ಮುರ್ಮು ಕಣಿವೆಯ ಬ್ರಾಂಡ್ ನ್ನು ಜಾಗತಿಕ ಭೂಪಟದಲ್ಲಿ ತರಲು ಇದು ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಬೆಳೆದ ಕೇಸರಿಗೆ ಭೌಗೋಳಿಕ ಮಾನ್ಯತೆಯ ಪ್ರಮಾಣೀಕರಣವನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ಅಧಿಕೃತ ವಕ್ತಾರರೊಬ್ಬರು ಹೇಳಿದ್ದಾರೆ. ಲೆಫ್ಟಿನೆಂಟ್ ಗೌರ್ನರ್ ಗಿರೀಶ್ ಚಂದ್ರ ಮುರ್ಮು ಅವರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಕಾಶ್ಮೀರದ ಕೇಸರಿಗೆ ಜಿಐ ಸರ್ಟಿಫಿಕೇಷನ್ ಸಿಗುವಂತೆ ಮಾಡುವುದರ ನಿಟ್ಟಿನಲ್ಲಿ ವೈಯಕ್ತಿಕ ಆಸಕ್ತಿ ವಹಿಸಿ ಕಾರ್ಯಪ್ರವೃತ್ತರಾಗಿದ್ದರು.
ಪ್ಯಾಂಪೋರ್ ಕಾಶ್ಮೀರದಲ್ಲಿನ ಕೇಸರಿ ಉತ್ಪಾದನೆಯ ಹಬ್ ಆಗಿದ್ದು, ನ್ಯಾಷನಲ್ ಮಿಷನ್ ಆನ್ ಸಾಫ್ರನ್ (ಎನ್ ಎಂಎಸ್) ಕೈಗೊಂಡಿರುವ ಕ್ರಮಗಳಿಂದಾಗಿ ಈ ಋತುವಿನಲ್ಲಿ ಅತಿ ಹೆಚ್ಚು ಇಳುವರಿ ಬರುವ ನಿರೀಕ್ಷೆ ಇದೆ.
3,715 ಹೆಕ್ಟೇರ್ ನಷ್ಟು ಪ್ರದೇಶವನ್ನು ಪುನರುಜ್ಜೀವನಗೊಳಿಸಿ ಕೇಸರಿ ಬೆಳೆ ಬೆಳೆಯುವುದಕ್ಕೆ 411 ಕೋಟಿ ರೂಪಾಯಿಗಳ ಯೋಜನೆಯ ಎನ್ಎಂಎಸ್ ಗೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಜಿಐ ಸರ್ಟಿಫಿಕೇಷನ್ ನಿಂದ ಕಾಶ್ಮೀರ ಕೇಸರಿಯ ಕಲಬೆರಕೆಯಾಗುವುದನ್ನು ನಿಲ್ಲಿಸಬಹುದಾಗಿದೆ. ಅಷ್ಟೇ ಅಲ್ಲದೇ ಕಾಶ್ಮೀರದ ಕೇಸರಿಗೆ ರಫ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗಲಿದೆ ಎಂದು ಮುರ್ಮು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ