ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದ ಭೀಕರ ಕೋಮುಗಲಭೆಯ ವೇಳೆ ಹತ್ಯೆಯಾದ ಗುಪ್ತಚರ ಸಂಸ್ಥೆಯ ಸಿಬ್ಬಂದಿ ಅಂಕಿತ್ ಶರ್ಮಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ದೆಹಲಿ ಆಡಳಿತರೂಢ ಆಮ್ ಆದ್ಮಿ ಪಕ್ಷದ ಕಾರ್ಪೊರೇಟರ್ ತಹೀರ್ ಹುಸೇನ್ ಅವರನ್ನು ಕೋರ್ಟ್ ಏಳು ದಿನ ಪೊಲೀಸ್ ವಶಕ್ಕೆ ನೀಡಿ ಶುಕ್ರವಾರ ಆದೇಶಿಸಿದೆ.
ನಿನ್ನೆ ಬಂಧನಕ್ಕೊಳಗಾಗಿದ್ದ ತಹೀರ್ ಹುಸೇನ್ ಅವರನ್ನು ಇಂದು ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟ್ ರಾಕೇಶ್ ಕುಮಾರ್ ರಾಂಪುರಿ ಅವರ ಮುಂದೆ ಹಾಜರುಪಡಿಸಲಾಯಿತು. ಆರೋಪಿಯ ವಿಚಾರಣೆ ನಡೆಸಿದ ಕೋರ್ಟ್, ಹೆಚ್ಚಿನ ವಿಚಾರಣೆಗಾಗಿ ಏಳು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
ವಿಶೇಷ ಕೋರ್ಟ್ ಗುರುವಾರ ಆರೋಪಿ ತಹೀರ್ ಹುಸೇನ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ದೆಹಲಿ ಪೊಲೀಸರು ಆಪ್ ನಾಯಕನನ್ನು ಬಂಧಿಸಿದ್ದರು.
ದೆಹಲಿಯ ಚಾಂದ್ಬಾಗ್ ಪ್ರದೇಶದ ಚರಂಡಿಯಲ್ಲಿ ಅಂಕಿತ್ ಶರ್ಮಾ ಅವರು ಹೆಣವಾಗಿ ಪತ್ತೆಯಾದ ಬಳಿಕ, ತಮ್ಮ ಮಗನ ಕೊಲೆ ಹಿಂದೆ ಕಾರ್ಪೊರೇಟರ್ ತಹೀರ್ ಹುಸೇನ್ ಕೈವಾಡ ಇದೆ ಎಂದು ಶರ್ಮಾ ಪೋಷಕರು ನೇರ ಆರೋಪ ಮಾಡಿದ್ದರು. ಅಲ್ಲದೆ ಈ ಸಂಬಂಧ ಪೊಲೀಸರಿಗೆ ದೂರು ಸಹ ನೀಡಿದ್ದರು.
ಪೊಲೀಸರು ಶರ್ಮಾ ಪೋಷಕರು ನೀಡಿದ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡಿದ್ದರು.
Advertisement