ನವದೆಹಲಿ: ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದ್ದು, ಮಾಜಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್ ತೊರೆದು ಕೇಸರಿ ಪಕ್ಷ ಸೇರಿದ ಕೆಲವೇ ಗಂಟೆಗಳಲ್ಲಿ ಮಾರ್ಚ್ 26 ರಂದು ನಡೆಯಲಿರುವ ರಾಜ್ಯಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಧ್ಯಪ್ರದೇಶದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಮಂಗಳವಾರ ಕಾಂಗ್ರೆಸ್ ತೊರೆದಿದ್ದ ಸಿಂಧಿಯಾ ಇಂದು ಕಮಲ ಪಾಳಯಕ್ಕೆ ಸೇರ್ಪಡೆಯಾಗಿದ್ದಾರೆ.
ರಾಜ್ಯಸಭೆ ಚುನಾವಣೆಗೆ ಅಸ್ಸಾಂನಿಂದ ಭುವನೇಶ್ವರ್ ಕಲಿಟಾ, ಬಿಹಾರದಿಂದ ವಿವೇಕ್ ಠಾಕೂರ್, ಅಭಯ್ ಭಾರದ್ವಾಜ್ ಮತ್ತು ಗುಜರಾತ್ ನಿಂದ ರಾಮಿಲಾಬೆನ್ ಬಾರಾ ಅವರನ್ನು ಅಭ್ಯರ್ಥಿಗಳಾಗಿ ಬಿಜೆಪಿ ಘೋಷಿಸಿದೆ.
ಅಲ್ಲದೆ, ಜಾರ್ಖಂಡ್ನಿಂದ ದೀಪಕ್ ಪ್ರಕಾಶ್, ಮಣಿಪುರದಿಂದ ಲೀಸೆಬಾ ಮಹಾರಾಜ, ಮಹಾರಾಷ್ಟ್ರದಿಂದ ಉದಯನ್ ರಾಜೇ ಭೋಸ್ಲೆ ಮತ್ತು ರಾಜಸ್ಥಾನದಿಂದ ರಾಜೇಂದ್ರ ಗೆಹ್ಲೋಟ್ ಅವರನ್ನು ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿಸಲಿದೆ.
Advertisement
Advertisement