ಮಧ್ಯ ಪ್ರದೇಶ ಸರ್ಕಾರ ಬಿಕ್ಕಟ್ಟು: ದೆಹಲಿ, ಗುರುಗ್ರಾಮ್ ಗೆ ಬಿಜೆಪಿ ಶಾಸಕರು, ಕಾಂಗ್ರೆಸ್ ಶಾಸಕರು ಇಂದು ಜೈಪುರಕ್ಕೆ
ನವದೆಹಲಿ; ಜ್ಯೋತಿರಾಧಿತ್ಯ ಸಿಂಧ್ಯಾ ಸೇರಿದಂತೆ ಒಟ್ಟು 23 ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಬಿಜೆಪಿ ತನ್ನ ಶಾಸಕರನ್ನು ಭೋಪಾಲ್ ನಿಂದ ದೆಹಲಿ ಮತ್ತು ಹರ್ಯಾಣದ ಗುರುಗ್ರಾಮ್ ಗೆ ಕಳುಹಿಸಿದೆ. ಕಳೆದ ತಡರಾತ್ರಿ ಬಿಜೆಪಿ ಶಾಸಕರು ಭೋಪಾಲ್ ವಿಮಾನ ನಿಲ್ದಾಣದಿಂದ ದೆಹಲಿ ಮತ್ತು ಗುರುಗ್ರಾಮ್ ಗೆ ಪ್ರಯಾಣ ಬೆಳೆಸಿದರು.
ಹೋಳಿ ಹಬ್ಬದ ಸಂಭ್ರಮಾಚರಣೆ ನೆಪದಲ್ಲಿ ನಾವಿಲ್ಲಿಗೆ ಬಂದಿದ್ದು ಇನ್ನು ಸ್ವಲ್ಪ ದಿವಸ ಇರುತ್ತೇವೆ ಎಂದು ಬಿಜೆಪಿ ಶಾಸಕ ಕೈಲಾಶ್ ವಿಜಯ್ ವರ್ಗಿಯ ಸುದ್ದಿಗಾರರಿಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದರು.
ಇನ್ನೊಂದೆಡೆ ಕಾಂಗ್ರೆಸ್ ನ ಶಾಸಕರು ಜೈಪುರಕ್ಕೆ ಇಂದು ಬೆಳಗ್ಗೆ ಹೊರಡಲಿದ್ದಾರೆ. ಕಾಂಗ್ರೆಸ್ ನ ಇಬ್ಬರು ಹಿರಿಯ ನಾಯಕರಾದ ಸಜ್ಜನ್ ಸಿಂಗ್ ವರ್ಮ ಮತ್ತು ಗೋವಿಂದ್ ಸಿಂಗ್ ಬೆಂಗಳೂರಿನಲ್ಲಿದ್ದು ಕೆಲವು ಬಂಡಾಯ ಶಾಸಕರ ಮನವೊಲಿಸಿ ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ.
ಜ್ಯೋತಿರಾಧಿತ್ಯ ಸಿಂಧ್ಯಾ ಮತ್ತು ಅವರ ಬೆಂಬಲಿತ ಶಾಸಕರ ರಾಜೀನಾಮೆಯಿಂದ ಮಧ್ಯ ಪ್ರದೇಶದಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿದೆ. ಕೇಂದ್ರದ ಮಾಜಿ ಸಚಿವ ಮುಕುಲ್ ವಾಸ್ನಿಕ್ ಮತ್ತು ಹಿರಿಯ ನಾಯಕ ಹರೀಶ್ ರಾವತ್, ಮಧ್ಯ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ದೀಪಕ್ ಬಬರಿಯಾ ಅವರಿಗೆ ಬಂಡಾಯ ಶಾಸಕರ ಮನವೊಲಿಸಿ ಮತ್ತೆ ಪಕ್ಷಕ್ಕೆ ಕರೆತರುವ, ಸರ್ಕಾರದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಶಮನಗೊಳಿಸುವ ಕೆಲಸವನ್ನು ಕಾಂಗ್ರೆಸ್ ಹೈಕಮಾಂಡ್ ನೀಡಿದೆ. ಇವರು ಅಸಂತೃಪ್ತ ಶಾಸಕರ ಜೊತೆ ಸಂಧಾನ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಿದ್ದಾರೆ.
ನಿನ್ನೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ ಜ್ಯೋತಿರಾಧಿತ್ಯ ಸಿಂಧ್ಯಾ ಈ ಮೂಲಕ ತಮ್ಮ 18 ವರ್ಷಗಳ ಪಕ್ಷದ ಜೊತೆಗಿನ ಬಾಂಧವ್ಯವನ್ನು ಕೊನೆಗೊಳಿಸಿದ್ದಾರೆ. ಇವರು ನಾಳೆಯೇ ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ನಾಳೆ ಅವರು ಗ್ವಾಲಿಯರ್ ಗೆ ಹೋಗಿ ನಂತರ ತಮ್ಮ ಬೆಂಬಲಿಗರೊಂದಿಗೆ ಭೋಪಾಲ್ ಗೆ ತೆರಳಲಿದ್ದಾರೆ.