ನವದೆಹಲಿ: ಅಭಿವೃದ್ಧಿಪರ ಕೆಲಸಗಳನ್ನು ಮಾಡಲು ಬಿಹಾರ ಜನತೆ ಮತ್ತೊಂದು ಅವಕಾಶ ನೀಡಿದ್ದಾರೆ ಎಂದು ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.
ನಿನ್ನೆಯ ಮತದಾನ ಫಲಿತಾಂಶ ಹೊರಬಿದ್ದ ನಂತರ ಆಡಳಿತಾರೂಢ ನಿತೀಶ್ ಕುಮಾರ್ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ 122 ಸ್ಥಾನಗಳು ಮತ್ತು ವಿರೋಧ ಪಕ್ಷ ಮಹಾಘಟಬಂಧನಕ್ಕೆ 113 ಸ್ಥಾನಗಳು ಬಂದಿವೆ.
ಇಡೀ ವಿಶ್ವಕ್ಕೆ ಬಿಹಾರ ಪ್ರಜಾಪ್ರಭುತ್ವದ ಮೊದಲ ಪಾಠ ಕಲಿಸಿದೆ. ಇಂದು ಮತ್ತೆ ಬಿಹಾರ ಜಗತ್ತಿಗೆ ಪ್ರಜಾಪ್ರಭುತ್ವವನ್ನು ಹೇಗೆ ಬಲಪಡಿಸಬಹುದು ಎಂದು ಹೇಳಿದೆ. ದಾಖಲೆಯ ಸಂಖ್ಯೆಯಲ್ಲಿ ರಾಜ್ಯದ ಬಡವರು, ನಿರ್ಗತಿಕರು ಮತ್ತು ಮಹಿಳೆಯರು ಮತ ಚಲಾಯಿಸಿದ್ದು ಅಭಿವೃದ್ಧಿಪರ ನಿರ್ಣಾಯಕ ತೀರ್ಪನ್ನು ನೀಡಿದ್ದಾರೆ ಎಂದು ಹಿಂದಿಯಲ್ಲಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಗ್ರಾಮಗಳಲ್ಲಿನ ಬಡವರು, ರೈತರು, ಕಾರ್ಮಿಕರು, ವ್ಯಾಪಾರಿಗಳು, ಅಂಗಡಿ ಮಾಲೀಕರು ಮತ್ತು ಪ್ರತಿ ವರ್ಗದವರು ಎನ್ ಡಿಎ ಮಂತ್ರವಾದ ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮೇಲೆ ನಂಬಿಕೆಯಿಟ್ಟಿದ್ದಾರೆ. ಪ್ರತಿ ವ್ಯಕ್ತಿಯ, ಪ್ರತಿ ಪ್ರದೇಶದ ಸಮಾನ ಅಭಿವೃದ್ಧಿಗೆ ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
Advertisement