ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರತಿಕ್ರಿಯಿಸಿದ್ದಾರೆ.
ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಅವರನ್ನು ಸಂಪಾದಕ, ಶಿವಸೇನೆ ನಾಯಕ ಸಂಜಯ್ ರಾವತ್ ಸಂದರ್ಶನ ಮಾಡಿರುವ ಸಂದರ್ಶನ ಪ್ರಕಟವಾಗಿದೆ.
ಸಂದರ್ಶನ ವೇಳೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಯುವ ಪ್ರತಿಭಾವಂತ ನಟ ನಿಧನ ಹೊಂದಿದ್ದು ನಿಜಕ್ಕೂ ದುರದೃಷ್ಟಕರ ಸಂಗತಿ. ಆದರೆ ಇದರಲ್ಲಿ ಕೆಲವರು ರಾಜಕೀಯ ಮಾಡಲು ಯತ್ನಿಸಿ ಕೆಳಮಟ್ಟಕ್ಕೆ ಇಳಿಯುತ್ತಿದ್ದಾರೆ. ನಿಜಕ್ಕೂ ಇದು ಕೊಳಕು ರಾಜಕೀಯ. ಒಂದು ಜೀವ ಹೋಗಿದೆ, ಈಗ ಆ ವಿಷಯ ಇಟ್ಟುಕೊಂಡು ರಾಜಕೀಯ ಮಾಡುವುದು ಎಷ್ಟು ಸರಿ, ಇದು ನಿಜಕ್ಕೂ ನಿಮಗೆ ಘನತೆಯೇ ಎಂದು ವಿರೋಧ ಪಕ್ಷ ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹ ಕಳೆದ ಜೂನ್ 14ರಂದು ಮುಂಬೈಯ ಬಾಂದ್ರಾದಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿತ್ತು. ಮುಂಬೈ ಪೊಲೀಸರ ತನಿಖೆಯಲ್ಲಿ ನಂಬಿಕೆಯಿಲ್ಲ ಎಂದು ನಟನ ಕುಟುಂಬಸ್ಥರು ಮತ್ತು ಅಭಿಮಾನಿಗಳು ತೀವ್ರವಾಗಿ ಒತ್ತಾಯಿಸಿದ ಹಿನ್ನೆಲೆಯಲ್ಲಿ ಸಿಬಿಐಗೆ ಕೇಸಿನ ತನಿಖೆಯನ್ನು ವಹಿಸಲಾಯಿತು.
ಇದೀಗ ಸಾವಿನ ಬಗ್ಗೆ ಸಿಬಿಐ, ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ ಮತ್ತು ಜಾರಿ ನಿರ್ದೇಶನಾಲಯ ಹಲವು ಆಯಾಮಗಳಲ್ಲಿ ಡ್ರಗ್ ಮತ್ತು ಅಕ್ರಮ ಹಣ ವರ್ಗಾವಣೆ ಕೇಸಿಗೆ ಸಂಬಂಧಪಟ್ಟಂತೆ ತನಿಖೆ ಮಾಡುತ್ತಿದೆ.
Advertisement