ಬಿಹಾರ ಚುನಾವಣೆ: ತೇಜಸ್ವಿ ಯಾದವ್ ಜಂಗಲ್ ರಾಜ್ ನ ಯುವರಾಜ- ಮೋದಿ
ಚುನಾವಣಾ ಕಣವಾಗಿರುವ ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ 2 ನೇ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದು, ಆರ್ ಜೆಡಿಯ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರನ್ನು ಜಂಗಲ್ ರಾಜ್ ನ ಯುವರಾಜ ಎಂದು ಕರೆದಿದ್ದಾರೆ.
"ಮತದಾರರು ಜಂಗಲ್ ರಾಜ್ ನ ಯುವರಾಜನ ಬಗ್ಗೆ ಎಚ್ಚರವಾಗಿರಿ" ಎಂದಿರುವ ಮೋದಿ ಆರ್ ಜೆಡಿ ಪಕ್ಷ ಅಪಹರಣದ ಕಾಪಿರೈಟ್ ಹೊಂದಿದೆ ಎಂದೂ ವ್ಯಂಗ್ಯವಾಗಿ ಟೀಕಿಸಿದ್ದಾರೆ.
ಕೋವಿಡ್-19 ಸಂದರ್ಭದಲ್ಲಿ ಜಂಗಲ್ ರಾಜ್ ಮರುಕಳಿಸಿದರೆ ರಾಜ್ಯಕ್ಕೆ ಎರಡೆರಡು ಸಂಕಷ್ಟ ಎದುರಾಗುತ್ತದೆ ಎಂದು ಮೋದಿ ಮತದಾರರಿಗೆ ಎಚ್ಚರಿಸಿದ್ದು, ಈ ಚುನಾವಣೆ ಬಿಹಾರವನ್ನು ಕತ್ತಲ ಕೂಪದಿಂದ ಹೊರತಂದವರನ್ನು ಮರು ಆಯ್ಕೆ ಮಾಡುವುದಕ್ಕೆ ಸಿಕ್ಕಿರುವ ಅವಕಾಶ ಎಂದು ಹೇಳಿದ್ದಾರೆ.
"ಜಂಗಲ್ ರಾಜ್ ನ ಯುವರಾಜನಿಂದ ಏನಾದರೂ ನಿರೀಕ್ಷಿಸಬಹುದೇ? ತಮಗಿಂತಲೂ ಜನರಿಗೇ ಹೆಚ್ಚು ಗೊತ್ತಿರುವ ಟ್ರ್ಯಾಕ್ ರೆಕಾರ್ಡ್ ನ ಆಧಾರದಲ್ಲಿ ಜಂಗಲ್ ರಾಜ್ ನ ಯುವರಾಜನನ್ನು ಮೌಲ್ಯಮಾಪನ ಮಾಡಬೇಕು" ಎಂದು ಹೆಸರು ಹೇಳದೆಯೇ ಆರ್ ಜೆಡಿ, ತೇಜಸ್ವಿ ಯಾದವ್ ವಿರುದ್ಧ ಮೋದಿ ಟೀಕಾ ಪ್ರಹಾರ ನಡೆಸಿದ್ದಾರೆ.
ಇದೇ ವೇಳೆ ಆರ್ ಜೆಡಿಯ 10 ಲಕ್ಷ ಸರ್ಕಾರಿ ಉದ್ಯೋಗಗಳ ಭರವಸೆ ಬಗ್ಗೆಯೂ ಮೋದಿ ಮಾತನಾಡಿದ್ದು, "ಆರ್ ಜೆಡಿ ಪಕ್ಷಕ್ಕೆ ಬಹುಮತ ದೊರೆತಲ್ಲಿ ಸರ್ಕಾರಿ ನೌಕರಿಗಳನ್ನು ಬಿಡಿ ಖಾಸಗಿ ಕಂಪನಿಗಳ ಉದ್ಯೋಗವೂ ಬೇರೆಡೆಗೆ ಸ್ಥಳಾಂತರಿಸಲಾಗುತ್ತದೆ" ಎಂದು ಮೋದಿ ಹೇಳಿದ್ದಾರೆ.
ನಿತೀಶ್ ಕುಮಾರ್ ನೇತೃತ್ವದಲ್ಲಿ ಬಿಹಾರಕ್ಕೆ ಶಾಂತಿ, ಸಮೃದ್ಧಿಯನ್ನು ತರಲಿರುವ ಹಲವು ಯೋಜನೆಗಳು ಕೇಂದ್ರ ಸರ್ಕಾರದ ಬಳಿ ಇದೆ ಎಂದು ಮೋದಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ