ಲಖನೌ: ಉತ್ತರ ಪ್ರದೇಶದ ಬಿಜೆಪಿ ಶಾಸಕಿ ಅಲ್ಕಾ ರಾಯ್ ತಮಗೆ ಸಹಾಯ ಮಾಡುವಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿಗೆ ಮನವಿ ಮಾಡಿದ್ದಾರೆ.
ಪ್ರಿಯಾಂಕ ಗಾಂಧಿಗೆ ಭಾವನಾತ್ಮಕ ಪತ್ರ ಬರೆದಿರುವ ಅಲ್ಕಾ ರಾಯ್ ಕಾಂಗ್ರೆಸ್ ನೇತೃತ್ವದ ಪಂಜಾಬ್ ಸರ್ಕಾರ ಕ್ರಿಮಿನಲ್ ಓರ್ವನ ಬೆನ್ನಿಗೆ ನಿಂತಿದೆ, ದಯಮಾಡಿ ತಮಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
ಬಿಎಸ್ ಪಿ ಶಾಸಕ ಮುಖ್ತಾರ್ ಅನ್ಸಾರಿ ವಿರುದ್ಧ ಅಲ್ಕಾ ರಾಯ್ ಅವರ ಪತಿ, ಮಾಜಿ ಶಾಸಕ ಕೃಷ್ಣಾನಂದ ರಾಯ್ ಅವರನ್ನು 2005 ರಲ್ಲಿ ಗುಂಡಿಕ್ಕಿ ಹತ್ಯೆ ಮಾಡಿರುವ ಆರೋಪವಿತ್ತು. ಆದರೆ ಪಂಜಾಬ್ ನ ಮೊಹಾಲಿ ಜೈಲಿನಲ್ಲಿರುವ ಅನ್ಸಾರಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣದಿಂದ ಮುಕ್ತಗೊಳಿಸಲಾಗಿತ್ತು.
ಈ ವಿಷಯವನ್ನು ಉಲ್ಲೇಖಿಸಿರುವ ಅಲ್ಕಾ ರಾಯ್ ತಾವು 14 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ, ಆದರೆ ನಿಮ್ಮ ಕಾಂಗ್ರೆಸ್ ನೇತೃತ್ವದ ಸರ್ಕಾರ ಆರೋಪಿ ಅನ್ಸಾರಿಯನ್ನು ಉತ್ತರ ಪ್ರದೇಶ ಜೈಲಿಗೆ ವರ್ಗಾವಣೆ ಮಾಡಲು ನಿರಾಕರಿಸಿ ಆತನ ಬೆನ್ನಿಗೆ ನಿಂತಿದೆ. ಇವೆಲ್ಲವೂ ನಿಮ್ಮ ಹಾಗೂ ರಾಹುಲ್ ಗಾಂಧಿ ಅವರ ಗಮನಕ್ಕೆ ಬಾರದೇ ನಡೆದಿದೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಮುಖ್ತಾರ್ ಅನ್ಸಾರಿ ವೃತ್ತಿಪರ ಕ್ರಿಮಿನಲ್ ಆಗಿದ್ದು, ಹಲವು ಕುಟುಂಬಗಳನ್ನು ನಾಶ ಮಾಡಿದ್ದಾನೆ ಎಂದು ಪತ್ರದಲ್ಲಿ ಅಲ್ಕಾ ರಾಯ್ ಆರೋಪಿಸಿದ್ದಾರೆ.
ನನ್ನಂತೆಯೇ ಹಲವರು ಮುಖ್ತಾರ್ ಅನ್ಸಾರಿಗೆ ಶಿಕ್ಷೆಯಾಗಬೇಕೆಂದು ನಿರೀಕ್ಷಿಸುತ್ತಿದ್ದಾರೆ. ಸೂಕ್ಷ್ಮತೆ, ಸಂವೇದನೆಯನ್ನು ಪ್ರದರ್ಶಿಸಿ ಆರೋಪಿಯನ್ನು ಪುನಃ ಕಟಕಟೆಗೆ ತಂದು ನಿಲ್ಲಿಸಲು ಸಹಾಯ ಮಾಡಿ" ಎಂದು ಪ್ರಿಯಾಂಕಾಗೆ ಬರೆದಿರುವ ಪತ್ರದಲ್ಲಿ ಅಲ್ಕಾ ಮನವಿ ಮಾಡಿದ್ದಾರೆ.
ಅಲ್ಕಾ ರಾಯ್ ಘಾಜಿಪುರದ ಮೊಹಮ್ಮದಾಬಾದ್ ನ ಬಿಜೆಪಿ ಶಾಸಕಿಯಾಗಿದ್ದಾರೆ.
Advertisement