ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಮತ್ತೆ ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಕೂಗು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷನ ಆಯ್ಕೆ ಮಾಡಲು ಕಾಂಗ್ರೆಸ್ ಶೀಘ್ರವೇ ಸಭೆ ಕರೆಯಲಿದೆ.
ಎಲ್ಲಾ ರಾಜ್ಯ ಕಾಂಗ್ರೆಸ್ ಘಟಕಗಳಿಗೂ ನೋಟೀಸ್ ಕಳುಹಿಸಲಾಗಿದ್ದು ಮತ ಚಲಾಯಿಸಲು ಅರ್ಹ ಸದಸ್ಯರ ಪಟ್ಟಿ ಕಳುಹಿಸುವಂತೆ ಸೂಚಿಸಲಾಗಿದೆ.
ಎಐಸಿಸಿಯೂ ತನ್ನ ಸಭೆ ಕರೆಯಲು ನಿರ್ಧರಿಸಿದ್ದು ಶೀಘ್ರವೇ ದಿನಾಂಕ ಮತ್ತು ಸ್ಥಳವನ್ನು ಅಂತಿಮಗೊಳಿಸಿ ತಿಳಿಸಲಾಗುವುದು ಎಂದು ಎಲ್ಲಾ ಕಾಂಗ್ರೆಸ್ ರಾಜ್ಯ ಘಟಕಗಳಿಗೆ ತಿಳಿಸಲಾಗಿದೆ.
ಈ ವರ್ಷದ ಅಂತ್ಯದಲ್ಲಿ ಇಲ್ಲ ಮುಂದಿನ ವರ್ಷದ ಆರಂಭದಲ್ಲಿ ಎಐಸಿಸಿ ಸಭೆ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕೇರಳ, ತಮಿಳುನಾಡು, ಪಶ್ಛಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಮುನ್ನವೇ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಎಲ್ಲಾವೂ ನಿರ್ಧಾರವಾಗಿದ್ದು, ಅಧಿಕೃತವಾಗಿ ಪ್ರಕಟಿಸಬೇಕಾಗಿದೆ. ಫೆಬ್ರವರಿ 2011ಕ್ಕೆ ಹೊಸ ಅಧ್ಯಕ್ಷರ ಆಯ್ಕೆಯಾಗಲಿದೆ ಎಂದು ಸೋನಿಯಾಗಾಂಧಿ ಆಗಸ್ಟ್ ತಿಂಗಳಲ್ಲಿ ತಿಳಿಸಿದ್ದರು. ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಕಪಿಲ್ ಸಿಬಲ್ ಮತ್ತು ಶಶಿ ತರೂರ್ ಸೇರಿದಂತೆ ಕಾಂಗ್ರೆಸ್ ನ 23 ಹಿರಿಯ ನಾಯಕರು ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಈ
ನಿರ್ಧಾರ ಕೈಗೊಳ್ಳಲಾಗಿದೆ.
ಸೋನಿಯಾ ಗಾಂಧಿ ಅವರು ಹುದ್ದೆಯಿಂದ ಕೆಳಗಿಳಿಯಲು ಬಯಸಿದರೇ ನೀವೇ ಹುದ್ದೆ ಅಲಂಕರಿಸಬೇಕು ಎಂದು ರಾಹುಲ್ ಗಾಂಧಿಗೆ, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್
ಅಮರಿಂದರ್ ಸಿಂಗ್, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್ಗಡ ಮುಖ್ಯಮಂತ್ರಿ ಭೂಪೇಶ್ ಭಾಗೆಲ್ ಸೇರಿದಂತೆ ಹಲವಾರು ರಾಜ್ಯ ಕಾಂಗ್ರೆಸ್ ನಾಯಕರು ಕೋರಿದ್ದಾರೆ.
Advertisement