ಕಂಗನಾ ರಾನಾವತ್ ಗೆ ಜೀವ ಬೆದರಿಕೆ:ತವರಿನಲ್ಲಿ, ಮುಂಬೈ ಭೇಟಿ ವೇಳೆ ಭದ್ರತೆ ಒದಗಿಸಲು ಹಿ.ಪ್ರ ಸರ್ಕಾರ ನಿರ್ಧಾರ
ಶಿಮ್ಲಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನ ನಂತರ ನಟಿ ಕಂಗನಾ ರಾನಾವತ್ ನೀಡುತ್ತಿರುವ ಹೇಳಿಕೆ, ಮುಂಬೈ ಬಗ್ಗೆ ಮಾಡಿರುವ ಟ್ವೀಟ್ ನ ನಂತರ ಉಂಟಾಗಿರುವ ವಿವಾದದ ಹಿನ್ನೆಲೆಯಲ್ಲಿ ಅವರ ಜೀವಕ್ಕೆ ಸುರಕ್ಷತೆಯಿಲ್ಲ ಎಂದು ಮನಗಂಡು ಅವರಿಗೆ ರಕ್ಷಣೆ ನೀಡಲು ಹಿಮಾಚಲ ಪ್ರದೇಶ ಸರ್ಕಾರ ನಿರ್ಧರಿಸಿದೆ.
ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ತಮ್ಮ ನಿವಾಸದಲ್ಲಿರುವ ಕಂಗನಾ ರಾನಾವತ್ ಅವರಿಗೆ ಮತ್ತು ಅವರ ಮುಂಬರುವ ಮುಂಬೈ ಭೇಟಿ ಸಮಯದಲ್ಲಿ ರಕ್ಷಣೆ ನೀಡುವುದಾಗಿ ಅಲ್ಲಿನ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಹೇಳಿದ್ದಾರೆ.
ಬಿಜೆಪಿ ಶಾಸಕಾಂಗ ಸಭೆಯ ನಂತರ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ. ಹಿಮಾಚಲ ಪ್ರದೇಶದ ಮಗಳಾಗಿರುವ ಕಂಗನಾ ಅವರಿಗೆ ರಕ್ಷಣೆ ನೀಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ತಮ್ಮ ಕುಟುಂಬಕ್ಕೆ ಮತ್ತು ಕಂಗನಾಗೆ ರಕ್ಷಣೆ ನೀಡಬೇಕೆಂದು ಕೋರಿ ಕಂಗನಾ ತಂದೆ ಮತ್ತು ಸೋದರಿ ನಮ್ಮ ಬಳಿ ಮನವಿ ಮಾಡಿಕೊಂಡಿದ್ದಾರೆ. ಆಕೆಯ ಸೋದರಿ ನನ್ನ ಜೊತೆ ನಿನ್ನೆ ಫೋನ್ ಮೂಲಕ ಮಾತನಾಡಿದ್ದಾರೆ. ತಮ್ಮ ಮಗಳಿಗೆ ಭದ್ರತೆ ನೀಡಬೇಕೆಂದು ಕೋರಿ ಅವರ ತಂದೆ ಕೂಡ ರಾಜ್ಯ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಅವರಿಗೆ ರಕ್ಷಣೆ ನೀಡುವಂತೆ ಡಿಜಿಪಿಯವರಿಗೆ ಹೇಳಿದ್ದೇನೆ ಎಂದರು.
ನಾಡಿದ್ದು 9ರಂದು ಅಂದರೆ ಬುಧವಾರ ಕಂಗನಾ ರಾನಾವತ್ ಮುಂಬೈಗೆ ಆಗಮಿಸುತ್ತಿದ್ದು ಈ ಸಂದರ್ಭದಲ್ಲಿ ಪೊಲೀಸ್ ಭದ್ರತೆ ಒದಗಿಸಲು ಹಿಮಾಚಲ ಪ್ರದೇಶ ಸರ್ಕಾರ ನಿರ್ಧರಿಸಿದೆ.
ಆದರೆ ಮುಖ್ಯಮಂತ್ರಿ, ಸಂಜಯ್ ರಾವತ್ ಅವರ ಬೆದರಿಕೆ ಹೇಳಿಕೆಗಾಗಲಿ, ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆಯಾಗಲಿ ಪ್ರತಿಕ್ರಿಯೆ ನೀಡಲಿಲ್ಲ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ