ಲಖನೌ: ಮಹಿಳೆಯರಿಗೆ ಲೈಂಗಿಕ ಕಿರುಕುಳ, ಅವರೆಡೆಗೆ ದೌರ್ಜನ್ಯ ನಡೆಸುವವರು ಚುಡಾಯಿಸುವವರ ವಿರುದ್ಧ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಆಪರೇಷನ್ ದುರಾಚಾರಿಯನ್ನು ಪ್ರಾರಂಭಿಸಿದೆ.
ಸಿಎಎಯನ್ನು ವಿರೋಧಿಸಿ ಪ್ರತಿಭಟಿಸಿ, ಸಾರ್ವಜನಿಕ ಆಸ್ತಿಗಳನ್ನು ಹಾನಿ ಮಾಡುವವರ ಹೆಸರನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸಿದಂತೆಯೇ, ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ, ಚುಡಾಯಿಸುವ ಪುಂಡರ ಹೆಸರನ್ನು ಫೋಟೋ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸುವುದಾಗಿ ಉತ್ತರ ಪ್ರದೇಶ ಸರ್ಕಾರ ಘೋಷಿಸಿದೆ.
ಈ ನಿಟ್ಟಿನಲ್ಲಿ ಈಗಾಗಲೇ ಸಿಎಂ ಯೋಗಿ ಆದಿತ್ಯನಾಥ್ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಮಹಿಳಾ ಪೊಲೀಸರಿಗೂ ಸಹ ಆಪರೇಷನ್ ದುರಾಚಾರಿಯಡಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳನ್ನು ನಿಯಂತ್ರಿಸುವುದಕ್ಕೆ ಯೋಗಿ ಸರ್ಕಾರ ಸೂಚಿಸಿದೆ.
ಲಖನೌ ಐಜಿ ಲಕ್ಷ್ಮಿ ಸಿಂಗ್ ಆಪರೇಷನ್ ಶಕ್ತಿಯನ್ನು ಮುನ್ನಡೆಸುತ್ತಿದ್ದು ಮಹಿಳೆಯರ ವಿರುದ್ಧ ದೌರ್ಜನ್ಯ ಎಸಗಿದ 2200 ಕ್ರಿಮಿನಲ್ ಗಳನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
Advertisement