ಪಾಸ್ ತೋರಿಸಿ ಎಂದ ಎಎಸ್ಐ ಕೈ ಕತ್ತರಿಸಿ, ಪೊಲೀಸರ ಮೇಲೆ ಹಲ್ಲೆ: ಪಟಿಯಾಲಾದಲ್ಲಿ ದುಷ್ಕರ್ಮಿಗಳ ಅಟ್ಟಹಾಸ

ಎಎಸ್ ಐ ಕೈಯನ್ನು ಕತ್ತರಿಸಿ ಮತ್ತಿಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ದುಷ್ಕರ್ಮಿಗಳ ಗುಂಪು ಹಲ್ಲೆ ಮಾಡಿ ಗಾಯಗೊಳಿಸಿದ ಘಟನೆ ಪಂಜಾಬ್ ನ ಪಟಿಯಾಲಾದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಂಡೀಗಢ: ಎಎಸ್ ಐ ಕೈಯನ್ನು ಕತ್ತರಿಸಿ ಮತ್ತಿಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ದುಷ್ಕರ್ಮಿಗಳ ಗುಂಪು ಹಲ್ಲೆ ಮಾಡಿ ಗಾಯಗೊಳಿಸಿದ ಘಟನೆ ಪಂಜಾಬ್ ನ ಪಟಿಯಾಲಾದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

ಇಂದು ನಸುಕಿನ ಜಾವ ನಿಹಂಗರು ಎಂದು ಕರೆಯಲ್ಪಡುವ ನಾಲ್ಕೈದು ಮಂದಿ ಸಿಖ್ ಧರ್ಮೀಯರು ವಾಹನವೊಂದರಲ್ಲಿ ಮಾರಕಾಸ್ತ್ರಗಳೊಂದಿಗೆ ಪ್ರಯಾಣ ಮಾಡುತ್ತಿದ್ದರು. ಅವರನ್ನು ಪಟಿಯಾಲಾದ ತರಕಾರಿ ಮಾರುಕಟ್ಟೆ ಬಳಿ ಪೊಲೀಸರು ತಡೆದು ಎತ್ತ ಹೋಗುತ್ತಿರುವುದು, ಪಾಸ್ ತೋರಿಸಿ ಎಂದು ಕೇಳಿದ್ದಾರೆ. ಅಷ್ಟೇ ಸಾಕಾಯಿತು, ಸಿಟ್ಟಿನಿಂದ ವಾಹನವನ್ನು ತರಕಾರಿ ಗೇಟಿಗೆ ನುಗ್ಗಿಸಿ ಮುಂದೆ ಹೋಗಿ ಬ್ಯಾರಿಕೇಡ್ ಮುರಿದು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರು.

ಘಟನೆಯಲ್ಲಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ಹರ್ಜೀತ್ ಸಿಂಗ್ ಕೈಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕತ್ತರಿಸಿಹಾಕಿದರು. ಸದರ್ ಪಟಿಯಾಲಾ ಸ್ಟೇಷನ್ ಇಬ್ಬರು ಪೊಲೀಸರ ಮೇಲೆ ಮತ್ತು ತರಕಾರಿ ಮಂಡಿ ಅಧಿಕಾರಿಯ ಹಲ್ಲೆ ನಡೆಸಿದರು ಎಂದು ಪಟಿಯಾಲಾ ಠಾಣೆಯ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ ಮಂದೀಪ್ ಸಿಂಗ್ ಸಿಧು ತಿಳಿಸಿದ್ದಾರೆ.

ಎಎಸ್ ಐ ಮತ್ತು ಇತರ ಇಬ್ಬರು ಅಧಿಕಾರಿಗಳನ್ನು ತಕ್ಷಣವೇ ರಾಜೀಂದ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತು ಅಲ್ಲಿಂದ ಎಎಸ್ ಐಯನ್ನು ಹೆಚ್ಚಿನ ಚಿಕಿತ್ಸೆಗೆ ಅವರನ್ನು ಚಂಡೀಗಢಕ್ಕೆ ಕರೆದೊಯ್ಯಲಾಗಿದೆ.ದಾಳಿ ಮಾಡಿದ ತಕ್ಷಣವೇ ಅಲ್ಲಿಂದ ನಿಹಂಗರು ಪರಾರಿಯಾಗಿದ್ದಾರೆ. ಅವರನ್ನು ಬಂಧಿಸಲು ಪ್ರಯತ್ನ ಮುಂದುವರಿದಿದೆ ಎಂದು ಪಂಜಾಬ್ ಪೊಲೀಸ್ ಮಹಾ ನಿರ್ದೇಶಕ ದಿನಕರ್ ಗುಪ್ತಾ ತಿಳಿಸಿದ್ದಾರೆ.

ಕೊರೋನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಲಾಕ್ ಡೌನ್ ಸಮಯದಲ್ಲಿ ಈ ಹಲ್ಲೆ ನಡೆದಿರುವುದು ದೇಶಾದ್ಯಂತ ವ್ಯಾಪಕ ಸುದ್ದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com