ನವದೆಹಲಿ: ಅದು 2019, ಫೆಬ್ರವರಿ 26, ನಸುಕಿನ ಹೊತ್ತು. ಭಾರತೀಯ ವಾಯುಪಡೆಯ ಯುದ್ಧವಿಮಾನ ಪಾಕಿಸ್ತಾನದ ಖೈಬರ್ ಪಕ್ತುಂಕ್ವ ಪ್ರಾಂತ್ಯದಲ್ಲಿರುವ ಬಾಲಕೋಟ್ ನಲ್ಲಿ ಜೈಶ್ ಇ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಶಿಬಿರ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿತು.
ಇದು ಅದೇ ತಿಂಗಳ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರ ವಾಹನದ ಮೇಲೆ ದಾಳಿ ಮಾಡಿ 40 ಯೋಧರ ಸಾವಿಗೆ ಪ್ರತೀಕಾರವಾಗಿ ಭಾರತ ಸರ್ಕಾರ ತೆಗೆದುಕೊಂಡ ದಿಟ್ಟ ಪ್ರತೀಕಾರವಾಗಿತ್ತು. ಪುಲ್ವಾಮಾದಲ್ಲಿ ಭಯಾನಕ ದಾಳಿಯಾದ 12 ದಿನಗಳ ನಂತರ ಸಂಭವಿಸಿದ ಭೀಕರ ದಾಳಿಯಿದು. ಭಾರತೀಯ ವಾಯುಪಡೆ ಮಿರಾಜ್ 2000 ಯುದ್ಧ ವಿಮಾನವನ್ನು ಬಳಸಿ ಪಾಕಿಸ್ತಾನದ ಬಾಲಕೋಟ್ ನಲ್ಲಿರುವ ಉಗ್ರರ ಶಿಬಿರ ತಾಣದ ಮೇಲೆ ದಾಳಿ ಮಾಡಿತ್ತು. ಇಲ್ಲಿ ಭಾರತೀಯ ಯುದ್ಧ ವಿಮಾನ ಸುಮಾರು 21 ನಿಮಿಷಗಳ ಕಾಲ ಪಾಕಿಸ್ತಾನದ ವಾಯುನೆಲೆಯಲ್ಲಿ ಹಾರಾಟ ನಡೆಸಿ 17 ಕಿಲೋ ಮೀಟರ್ ಸುತ್ತುತ್ತಾ ದಾಳಿ ಮಾಡಿತ್ತು.
ಭಾರತೀಯರೆಲ್ಲರೂ ವಾಯುಸೇನೆಯ ಕಾರ್ಯವನ್ನು ಶ್ಲಾಘಿಸಿದರು. ವಿದೇಶಾಂಗ ಸಚಿವ ವಿಜಯ್ ಕೆ ಗೋಖಲೆ, ಭಾರತ ಪಾಕಿಸ್ತಾನದಲ್ಲಿರುವ ಅತಿದೊಡ್ಡ ತರಬೇತಿ ಶಿಬಿರವನ್ನು ಕೆಡವಿದೆ. ಈ ಕಾರ್ಯಾಚರಣೆಯಲ್ಲಿ ಜೈಶ್ ಇ ಮೊಹಮ್ಮದ್ ಸಂಘಟನೆಯ ಉಗ್ರರು, ತರಬೇತುದಾರರು, ಹಿರಿಯ ಕಮಾಂಡರ್ ಗಳು, ಜಿಹಾದಿಗಳನ್ನು ಕೊಲ್ಲಲಾಗಿದೆ ಎಂದು ಹೇಳಿಕೆ ಕೊಟ್ಟರು. ಬಾಲಕೋಟ್ ನಲ್ಲಿರುವ ಉಗ್ರರ ಶಿಬಿರ ತಾಣವನ್ನು ಜೈಶ್ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನ ಸಂಬಂಧಿ ಮೌಲಾನಾ ಯೂಸಫ್ ಅಜರ್ ವಹಿಸಿಕೊಂಡಿದ್ದ.
ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್: ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಮರುದಿನ ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಮಿಲಿಟರಿ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಿತು. ಆಗ ಎರಡೂ ದೇಶಗಳ ವಾಯುಪಡೆಗಳ ಮಧ್ಯೆ ನಡೆದ ಯುದ್ಧದಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಮಿಗ್ -21 ಬಿಸನ್ ಯುದ್ಧ ವಿಮಾನವನ್ನು ನಡೆಸಿ ಪಾಕಿಸ್ತಾನದ ಅತ್ಯಾಧುನಿಕ ಎಫ್-16ನ್ನು ಅಟ್ಟಾಡಿಸಿಕೊಂಡು ಹೋಗಿ ಉರುಳಿಸಿದರು. ಪಾಕಿಸ್ತಾನದ ಯುದ್ಧ ವಿಮಾನವನ್ನು ಬೆನ್ನಟ್ಟಿಕೊಂಡು ಹೋಗುವಾಗ ಪಾಕ್ ಆಕ್ರಮಿತ ಕಾಶ್ಮೀರ ಭಾಗಕ್ಕೆ ನುಗ್ಗಿದ್ದರು. ಅಲ್ಲಿ ಅವರ ವಿಮಾನಕ್ಕೆ ಪಾಕ್ ಯುದ್ಧ ವಿಮಾನ ಹೊಡೆದು ಅವರನ್ನು ಸೆರೆಹಿಡಿದು ಪಾಕಿಸ್ತಾನ ಕಸ್ಟಡಿಗೆ ಒಯ್ದಿತು.
ಇದು ಎರಡೂ ದೇಶಗಳ ಮಧ್ಯೆ ವ್ಯಾಪಕ ರಾಜಕೀಯ, ರಾಜತಾಂತ್ರಿಕ, ನಿಯೋಗ ಮಟ್ಟದಲ್ಲಿ ತೀವ್ರ ಒತ್ತಡ, ಚರ್ಚೆಗೆ ಕಾರಣವಾದವು. ಭಾರತದ ನಾಯಕರಿಂದ ತೀವ್ರ ರಾಜತಾಂತ್ರಿಕ ಒತ್ತಡ ಬಂದು ಕೊನೆಗೆ ಮೂರು ದಿನಗಳ ನಂತ ಮಾರ್ಚ್ 1ರಂದು ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಿತು. ಕಮಾಂಡರ್ ಅಭಿನಂದನ್ ಅವರ ಧೈರ್ಯ, ಸಾಹಸಕ್ಕೆ ಮೆಚ್ಚಿ ಭಾರತ ಸರ್ಕಾರ ಅವರಿಗೆ ವೀರಚಕ್ರವನ್ನು ನೀಡಿ ಗೌರವಿಸಿತು.
Advertisement