ಕಾನ್ಪುರ್: ಉತ್ತರ ಪ್ರದೇಶದ 8 ಪೊಲೀಸರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಆರೋಪದ ಮೇಲೆ ಇಬ್ಬರು ಸಬ್ ಇನ್ಸ್ ಪೆಕ್ಟರ್ ಹಾಗೂ ಓರ್ವ ಪೊಲೀಸ್ ಪೇದೆ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಚೌಬೆಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ಗಳಾದ ಕುನ್ವರ್ಪಾಲ್ ಮತ್ತು ಕೃಷ್ಣ ಕುಮಾರ್ ಶರ್ಮಾ ಹಾಗೂ ಕಾನ್ಸ್ಟೆಬಲ್ ರಾಜೀವ್ ಸೇರಿದಂತೆ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಪ್ರಾಥಮಿಕ ವಿಚಾರಣೆ ಪ್ರಾರಂಭಿಸಲಾಗಿದೆ ಎಂದು ಕಾನ್ಪುರ ಎಸ್ಎಸ್ಪಿ ದಿನೇಶ್ ಕುಮಾರ್ ಪಿ ಹೇಳಿದ್ದಾರೆ.
ಎಂಟು ಪೊಲೀಸ್ ಸಿಬ್ಬಂದಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೂವರು ಕರ್ತವ್ಯಲೋಪ ಎಸಗಿದ್ದು, ಅವರ ವಿರುದ್ಧ ಎಫ್ಐಆರ್ ಸಹ ದಾಖಲಿಸಲಾಗಿದೆ ಎಂದು ಪೊಲೀಸ್ ಪಿಆರ್ ತಿಳಿಸಿದ್ದಾರೆ.
ಇನ್ನು ಎಂಟು ಪೊಲೀಸರನ್ನು ಹತ್ಯೆ ಮಾಡಿದ ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆ ಬಗ್ಗೆ ಸುಳಿವು ಕೊಟ್ಟರೆ 2.5 ಲಕ್ಷ ಬಹುಮಾನ ನೀಡುವುದಾಗಿ ಉತ್ತರ ಪ್ರದೇಶ ಸರ್ಕಾರ ಘೋಷಣೆ ಮಾಡಿದೆ.
ಉತ್ತರ ಪ್ರದೇಶ ಪೊಲೀಸರು ಭಾನುವಾರ ವಿಕಾಸ್ ದುಬೆ ಬಗ್ಗೆ ಸುಳಿವು ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದರು. ಸೋಮವಾರ ಇದನ್ನು 2.5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ವಿಕಾಸ್ ದುಬೆಗಾಗಿ ಪೊಲೀಸರು ಸಹ ಹುಡುಕಾಟ ಮುಂದುವರೆಸಿದ್ದಾರೆ.
Advertisement