ಮಧ್ಯ ಪ್ರದೇಶದಲ್ಲಿ ಕರ್ನಾಟಕ ಮಾದರಿ ಆಪರೇಷನ್; 8 ಶಾಸಕರು ಐಷಾರಾಮಿ ಹೋಟೆಲ್ ಗೆ ಶಿಫ್ಟ್?
ಭೂಪಾಲ್: ಕರ್ನಾಟಕದಲ್ಲಿ ನಡೆದ ಆಪರೇಷನ್ ಕಮಲ ಮಾದರಿಯಲ್ಲಿ ತಡರಾತ್ರಿ ಮಧ್ಯಪ್ರದೇಶದಲ್ಲಿ ಆಪರೇಷನ್ ಆರಂಭಗೊಂಡಿದ್ದು 12 ಮಂದಿ ಶಾಸರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ. ಈ ಸಂಬಂಧ 8 ಮಂದಿ ಶಾಸಕರು ದೆಹಲಿಗೆ ಶಿಫ್ಟ್ ಆಗಿದ್ದಾರೆ.
ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 15 ತಿಂಗಳು ಕಳೆದಿವೆ. ಈ ಸರ್ಕಾರ ಅಸ್ತಿತ್ವಕ್ಕೆ ಬರುವ ಸಂದರ್ಭದಲ್ಲೂ ರೆಸಾರ್ಟ್ ರಾಜಕಾರಣ ನಡೆದಿತ್ತು. ಆದರೆ, ಇತರೆ ಪಕ್ಷಗಳ ಅಭ್ಯರ್ಥಿಗಳ ಸಹಕಾರದಿಂದ ಬಹುಮತ ಪಡೆದು ಕಮಲನಾಥ್ ಸಿಎಂ ಗದ್ದುಗೆಗೆ ಏರಿದ್ದರು.
ಈಗ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಾಂಗ್ರೆಸ್ ಪಕ್ಷದ ನಾಲ್ವರು ಶಾಸಕರು ಗುರುಗಾಂವ್ನಲ್ಲಿರುವ ಸ್ಟಾರ್ ಹೋಟೆಲ್ ಸೇರಿಕೊಂಡಿದ್ದಾರೆ. ರಾತ್ರೋರಾತ್ರಿ ನಡೆದ ಈ ಬೆಳವಣಿಗೆಯಿಂದ ಕಮಲನಾಥ್ ಸರ್ಕಾರಕ್ಕೆ ಆತಂಕಕ್ಕೆ ಒಳಗಾಗಿದೆ.
ಕಾಂಗ್ರೆಸ್ನ ನಾಲ್ವರು ಶಾಸಕರು ಸ್ಟಾರ್ ಹೋಟೆಲ್ ಪಾಲಾಗಿರುವುದು ನಿಜ. ಈ ವಿಷಯ ತಿಳಿಯುತ್ತಿದ್ದಂತೆ ಸಚಿವರಾದ ಜಿತು ಪತ್ವಾರಿ ಮತ್ತು ಜೈವರ್ಧನ್ ಸಿಂಗ್ ಆ ಹೋಟೆಲ್ ಬಳಿ ಹೋಗಿದ್ದರು. ಆ ನಾಲ್ವರು ಶಾಸಕರ ಮನವೊಲಿಸಲು ಪ್ರಯತ್ನಿಸಿದ ಸಚಿವರು ರಮಾಬಾಯಿ ಅವರನ್ನು ವಾಪಾಸ್ ಕರೆತಂದಿದ್ದಾರೆ. ಆ ವೇಳೆ ಬಿಜೆಪಿಯವರು ಅವರನ್ನು ತಡೆಯಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ ಎಂದು ಕಾಂಗ್ರೆಸ್ ನಾಯಕ ದಿಗ್ವಜಯ ಸಿಂಗ್ ಆರೋಪಿಸಿದ್ದಾರೆ.
ಜೆಪಿಯ ರಾಂಪಾಲ್ ಸಿಂಗ್, ನರೋತ್ತಮ್ ಮಿಶ್ರಾ, ಅರವಿಂದ ಬದೌರಿಯಾ ಮತ್ತು ಸಂಜಯ್ ಪಾಠಕ್ ಶಾಸಕರಿಗೆ ಹಣ ನೀಡಿದ್ದಾರೆ. ಈ ಎಲ್ಲ ಶಾಸಕರು ಕಾಂಗ್ರೆಸ್ಸಿಗೆ ಮರಳಲಿದ್ದಾರೆ ಎಂದು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಮುಖ್ಯಮಂತ್ರಿ ಕಮಲನಾಥ್ ಪ್ರತಿಕ್ರಿಯಿಸಿ, ನಮ್ಮ ಸರ್ಕಾರಕ್ಕೆ ಏನು ಆಗುವುದಿಲ್ಲ. ಎಲ್ಲ ಶಾಸಕರು ವಾಪಸ್ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.