ನವದೆಹಲಿ: ಮಲೇರಿಯಾ ವಿರೋಧಿ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ನಿಂದ ಅಂತಹ ಹೇಳಿಕೊಳ್ಳುವಂತಹ ಬಹು ದೊಡ್ಡ ಅಡ್ಡ ಪರಿಣಾಮ ಆಗಲ್ಲ ಎಂಬುದು ಅಧ್ಯಯನದಲ್ಲಿ ಕಂಡುಬಂದಿದ್ದು, ಕೋವಿಡ್-19 ತಡೆಗಟ್ಟಲು ಅದನ್ನು ಮುಂದುವರೆಸುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಮಂಗಳವಾರ ಹೇಳಿದೆ.
ಸುರಕ್ಷತೆ ಹಿನ್ನೆಲೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ವೈದ್ಯಕೀಯ ಪ್ರಯೋಗಕ್ಕೆ ವಿಶ್ವ ಆರೋಗ್ಯ ಸಂಸ್ಥೆ ತಾತ್ಕಾಲಿಕವಾಗಿ ತಡೆ ನೀಡಿದ ನಂತರ ಭಾರತ ಈ ರೀತಿಯ ಹೇಳಿಕೆ ನೀಡಿದೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ಉಪಯೋಗಿಸುವುದರಿಂದ ವಾಂತಿ, ವಾಕರಿಕೆ, ನಾಡಿ ಮಿಡಿತದಂತಹ ಸಮಸ್ಯೆಗಳನ್ನು ಹೊರತುಪಡಿಸಿದಂತೆ ಅಂತಹ ಹೇಳಿಕೊಳ್ಳುವಂತಹ ಅಡ್ಡ ಪರಿಣಾಮವಾಗದಿರುವುದನ್ನು ಕಂಡುಹಿಡಿದ್ದೇವೆ. ಆದಾಗ್ಯೂ, ಇದರಿಂದ ಯಾವುದೇ ತೊಂದರೆಯಾಗದ ಹಿನ್ನೆಲೆಯಲ್ಲಿ ಅವುಗಳನ್ನು ಮುಂದುವರೆಸುವಂತೆ ಶಿಫಾರಸು ಮಾಡಿದ್ದೇವೆ ಎಂದು ಐಸಿಎಂಆರ್ ನಿರ್ದೇಶಕ ಜನರಲ್ ಬಲರಾಮ್ ಭಾರ್ಗವ ಹೇಳಿದ್ದಾರೆ.
ಖಾಲಿ ಹೊಟ್ಟೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ತೆಗೆದುಕೊಳ್ಳಬಾರದು, ಊಟದೊಂದಿಗೆ ಅದನ್ನು ತೆಗೆದುಕೊಳ್ಳಿ ಎಂದು ಅವರು ಸ್ಪಷ್ಪಪಡಿಸಿದ್ದಾರೆ.
ಚಿಕಿತ್ಸೆ ಸಂದರ್ಭದಲ್ಲಿ ಒಂದು ಬಾರಿ ಇಸಿಜಿ ಮಾಡುವಂತೆ ಒತ್ತಿ ಹೇಳಲಾಗಿದೆ. ಆರೋಗ್ಯ ಕಾರ್ಯಕರ್ತರಿಂದ ಹಿಡಿದು ಕೊರೋನಾ ವಿರುದ್ಧದ ಮುಂಚೂಣಿಯಲ್ಲಿರುವವರೆಗೂ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆಯನ್ನು ವಿಸ್ತರಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ದೇಶಲ್ಲಿ ಕೋವಿಡ್ -19 ಪರಿಸ್ಥಿತಿ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪರೀಕ್ಷಾ ಸೌಕರ್ಯವನ್ನು ಅಧುನೀಕರಣಗೊಳಿಸಲಾಗಿದೆ. ಪ್ರತಿ ದಿನ ಸುಮಾರು 1 ಲಕ್ಷ ಜನರಿಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.
ದೇಶದಲ್ಲಿ ಚೇತರಿಕೆ ಪ್ರಮಾಣದಲ್ಲಿ ಸುಧಾರಣೆಯಾಗಿದೆ. ಪ್ರಸ್ತುತ ಶೇ. 41. 61 ರಷ್ಟು ಗುಣಮುಖರಾಗುತ್ತಿದ್ದಾರೆ. ಏಪ್ರಿಲ್ 15ರಿಂದ ಮರಣ ಪ್ರಮಾಣ ಶೇ. 3.3 ರಿಂದ ಶೇ. 2. 87ಕ್ಕೆ ಇಳಿದಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ ವಾಲ್ ತಿಳಿಸಿದ್ದಾರೆ.
Advertisement